ಬಾಲ್ಯ, ಯಕ್ಷಗಾನ ಪಾದಾರ್ಪಣೆ
ಕುಂದಾಪುರ ತಾಲುಕಿನ ಸಿರಿಯಾರ ಸಮೀಪ ಸಕ್ಕಟ್ಟಿನಲ್ಲಿ 1926 ರಲ್ಲಿ ಸುಬ್ಬಣ್ಣಯ್ಯ ಮತ್ತು ರಾಜಮ್ಮ ದಂಪತಿಗಳ ಸುಪುತ್ರನಾಗಿ ಸ್ಠಾನಿಕ ಭ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು ಕಿರು ವಯಸ್ಸಿನಲ್ಲೆ ಪುಸ್ತಕದ ಬದುಕಿಗೆ ತಿಲಾಂಜಲಿಯಿತ್ತು ಬಣ್ಣದ ಬದುಕನ್ನು ಆರಿಸಿಕೊಂಡರು. ಯಕ್ಷಗಾನ ಕುಟುಂಬದದಿಂದ ಬಂದ ಇವರು ತಂದೆ ಸುಬ್ಬಣ್ಣಯ್ಯನವರಲ್ಲಿ ಪಳಗಿ ಶ್ರೀನಿವಾಸ ಭಾಗವತರಲ್ಲಿ ತಾಳ ಅಭ್ಯಾಸ ಮಾಡಿ ಅಮೃತೇಶ್ವರಿ ಮೇಳದಲ್ಲಿ ಹೆಜ್ಜೆ ಕಲಿತು ಅದೇ ಮೇಳವನ್ನು ಸೇರಿದರು.
ಯಕ್ಷಗಾನದ ವಿವಿಧ ಮಜಲನ್ನು ದಾಟಿದ ಇವರು ಪಾಂಡೇಶ್ವರ ಸದಾಶಿವಯ್ಯ ಹಾಗೂ ಕೋಳ್ಕೆಬೈಲು ಕುಷ್ಟನವರಿಂದ ಮುಖವರ್ಣಿಕೆ ಕಲಿತು ಬಣ್ಣದ ವೇಷದಲ್ಲಿ ಪರಿಪೂರ್ಣತೆ ಪಡೆದರು. ಅಮೃತೇಶ್ವರಿ, ಸೌಕೂರು, ಸಾಲಿಗ್ರಾಮ, ಶಿರಸಿ ಮುಂತಾದ ಮೇಳಗಳಲ್ಲಿ ಸೇವೆ ಸಲ್ಲಿಸಿದ ಇವರು ಮಂದಾರ್ತಿ ಮೇಳವೊಂದರಲ್ಲೇ 39 ವರ್ಷ ತಿರುಗಾಟ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಅದ್ವೀತಿಯ ಬಣ್ಣದ ವೇಷಧಾರಿ
ಸುಮಾರು 60ರ ದಶಕದಲ್ಲಿ ಅವರು ಮಂದಾರ್ತಿ ಮೇಳದಲ್ಲಿ ನಿರ್ವಹಿಸುತಿದ್ದ ಖಳ ಪಾತ್ರಗಳಾದ ಘಟೋತ್ಕಜ, ಶೂರ್ಫನಖಾ, ಪೂತನಿ, ಹಿಡಿಂಬಾಸುರ ಹಿಡಿಂಬೆ, ಕಾಲಜಂಘ, ರಕ್ತಜಂಘ, ರಕ್ತಬೀಜ, ಕಾಲನೇಮಿ, ಶೂರಪದ್ಮಸುರ, ಮುಂತಾದ ಬಣ್ಣದ ವೇಷಗಳು ಇಂದಿಗೂ ಜನಮನದಲ್ಲಿ ನೆಲೆನಿಂತಿವೆ.
ಅವರ ರಕ್ಕಸ ವೇಷಗಳನ್ನು ನೋಡಿ ಮಕ್ಕಳು ಹೆದರಿ ಓಡುತಿದ್ದ ದೃಶ್ಯ ಸರ್ವೇ ಸಾಮನ್ಯವಾಗಿತ್ತು. ಸುಮಾರು ಐದು ಗಂಟೆಗಳ ಕಾಲ ಚೌಕಿಯಲ್ಲಿ ಕುಳಿತು ಮುಖವರ್ಣಿಕೆ ಮಾಡಿಕೊಳ್ಳುವ ತಾಳ್ಮೆ ಇತರರಿಗೆ ಅನುಕರಣೀಯ. ದಿನವು ಹುಳಿ ಅಕ್ಕಿ ಹಿಟ್ಟಿನ ಚಿಟ್ಟೆ ಇಡುವ ಕ್ರಮ ಇವರದ್ದು. ಬಡಗುತಿಟ್ಟಿನ ಏಕಮೇವಾದ್ವೀತಿಯ ಬಣ್ಣದ ವೇಷಧಾರಿಯಾಗಿ ಮೂಡಿಬಂದ ಇವರು ಯಕ್ಷಗಾನದ ಬಣ್ಣದ ವೇಷಗಳ ಕಮ್ಮಟ ಗೋಷ್ಠಿಗಳಲ್ಲಿ ಅನಿವಾರ್ಯ ಕಲಾವಿದರಾಗಿದ್ದರು.
ಪ್ರಶಸ್ತಿಗಳ ಸರಮಾಲೆ
ರಾಷ್ಟ್ರ ಪ್ರಶಸ್ತಿ ವಿಜೇತ ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ ನಾರಯಣ ಗಾಣಿಗ, ಜಾನುವಾರುಕತ್ತೆ ಭಾಗವತರು, ಹಿರಿಯಡ್ಕ ಗೋಪಲರಾಯರೊಂದಿಗೆ ತಿರುಗಾಟ ಮಾಡಿದ ಕೀರ್ತಿ ಇವರಿಗಿದೆ.
ಸಕ್ಕಟ್ಟಿನವರನ್ನು ಅರಸಿಬಂದ ಪ್ರಶಸ್ತಿಗಳು ನೂರಾರು. ಭಾರತದ ಅಂದಿನ ಪ್ರದಾನಿ ಜವಾಹರಲಾಲ್ ನೆಹರು ಹಾಗು ರಾಷ್ಟಪತಿ ರಾಜೇಂದ್ರ ಪ್ರಸಾದರಿಂದ ದೆಹಲಿಯಲ್ಲಿ ಪಡೆದ ಪ್ರಶಸ್ತಿ ಯಕ್ಷಗಾನಕ್ಕೆ ಸಂದ ಅತ್ತ್ಯುನ್ನತ ಗೌರವವಾಗಿತ್ತು. ಶಿವರಾಮ ಕಾರಂತರ "ಯಕ್ಷರಂಗ" ದ ಮೂಲಕ ಪ್ರಪಂಚದ ಮಹಾನಗರಗಳಲ್ಲಿ ಬಣ್ಣದ ವೇಷದ ಆರ್ಭಟ ಅನುರಣಿಸುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
1986 ರ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ ಸಹಿತ ನೂರಾರು ಸನ್ಮಾನಗಳು ಇವರಿಗೆ ಸಂದಿವೆ. ಉಡುಪಿ ಯಕ್ಷಗಾನ ಕಲಾರಂಗದ ಪ್ರಥಮ ಬಿ. ಬಿ. ಶೆಟ್ಟಿ ಪ್ರಶಸ್ತಿ ಇವರಿಗೆ ಸಂದಿದೆ. ಮಂದಾರ್ತಿ ಮೇಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಇವರಿಗೆ ಶ್ರೀ ಕೇತ್ರ ನೀಡುವ ಹಾರಾಡಿ ರಾಮ ಗಾಣಿಗ ಪ್ರಶಸ್ತಿಯೂ ಲಬಿಸಿತ್ತು. ಉಡುಪಿಯಲ್ಲಿ ಮಂಗಳಾದೇವಿ ಮೇಳದಲ್ಲಿ ಸಂದ ಕುಕ್ಕೆಹಳ್ಳಿ ಮಾಹಬಲ ಹೆಗ್ದೆ ಪ್ರಶಸ್ತಿಯು ಅವರಿಗೆ ಸಂದ ಕೊನೆಯ ಸನ್ಮಾನವಾಗಿತ್ತು
ಸುದೀರ್ಘಕಾಲ ಬಣ್ಣದ ವೇಷಧಾರಿಯಾಗಿ ಬಡಗುತಿಟ್ಟು ರಂಗಸ್ಟಳವನ್ನು ಆಳಿದ ಶ್ರೀಯುತರು ಹೃದಯಾಘಾತದಿ೦ದ 2011ನೇ, ಮಾರ್ಚ್ 31ರ೦ದು ನಿಧನವಾದರು
|
ಸಕ್ಕಟ್ಟು ಲಕ್ಷ್ಮೀನಾರಯಣಯ್ಯ |
 |
ಜನನ |
: |
1926 |
ಜನನ ಸ್ಥಳ |
: |
ಸಕ್ಕಟ್ಟು, ಸಿರಿಯಾರ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಬಡಗುತಿಟ್ಟಿನ ಏಕಮೇವಾದ್ವೀತಿಯ ಬಣ್ಣದ ವೇಷಧಾರಿಯಾಗಿ ಅಮೃತೇಶ್ವರಿ, ಸೌಕೂರು, ಸಾಲಿಗ್ರಾಮ, ಶಿರಸಿ ಹಾಗೂ ಮಂದಾರ್ತಿ ಮುಂತಾದ ಮೇಳಗಳಲ್ಲಿ
ಕಲಾಸೇವೆ.
|
ಪ್ರಶಸ್ತಿಗಳು:
- ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಹಾಗು ರಾಷ್ಟಪತಿ ರಾಜೇಂದ್ರ ಪ್ರಸಾದರಿಂದ ದೆಹಲಿಯಲ್ಲಿ ಪ್ರಶಸ್ತಿ
- 1986 ರ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
- ಕರ್ನಾಟಕ ರಾಜ್ಯ ಪ್ರಶಸ್ತಿ
- ಉಡುಪಿ ಯಕ್ಷಗಾನ ಕಲಾರಂಗದ ಪ್ರಥಮ ಬಿ. ಬಿ. ಶೆಟ್ಟಿ ಪ್ರಶಸ್ತಿ
- ಮಂದಾರ್ತಿ ಮೇಳದ ಹಾರಾಡಿ ರಾಮ ಗಾಣಿಗ ಪ್ರಶಸ್ತಿ
- ಮಂಗಳಾದೇವಿ ಮೇಳದಲ ಕುಕ್ಕೆಹಳ್ಳಿ ಮಾಹಬಲ ಹೆಗ್ದೆ ಪ್ರಶಸ್ತಿ
- ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
|
ಮರಣ ದಿನಾ೦ಕ |
: |
ಮಾರ್ಚ್ 31, 2011 |
|
|