ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕಲಾಸೇವೆಯ ರಜತ ಸ೦ಭ್ರಮಿಸಿದ ಉಳ್ಳೂರು ಶಂಕರ ದೇವಾಡಿಗ

ಲೇಖಕರು : ಎಚ್‌. ಆನಂದ ಮಡಿವಾಳ
ಸೋಮವಾರ, ಡಿಸೆ೦ಬರ್ 8 , 2014

ಕುಂದಾಪುರ ತಾಲೂಕಿನ 11ನೇ ಉಳ್ಳೂರಿನ ಚಂದ್ರಾವತಿ ಮತ್ತು ನಾರಾಯಣ ದೇವಾಡಿಗರ ಒಂಬತ್ತು ಮಂದಿ ಮಕ್ಕಳಲ್ಲಿ ಮೂರನೆಯವರಾದ ಶಂಕರ ದೇವಾಡಿಗ ಪ್ರಾಥಮಿಕ ಶಿಕ್ಷಣಕ್ಕೆ ತಿಲಾಂಜಲಿ ನೀಡಿ ಮೊದಲು ಆಯ್ಕೆ ಮಾಡಿಕೊಂಡಿದ್ದು ಹೊಲಿಗೆ ವೃತ್ತಿಯನ್ನು. ತನ್ನ ಕಸಬಿನೊಂದಿಗೆ ಖ್ಯಾತ ಭಾಗವತರಾದ ಹೆರಂಜಾಲು ಗೋಪಾಲ ಗಾಣಿಗರಿಂದ ಹೆಜ್ಜೆ ಹಾಗೂ ನರ್ತನವನ್ನು ಕಲಿತು ತನ್ನ 15ನೇ ವಯಸ್ಸಿಗೆ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿ ಕೀರ್ತಿಶೇಷ ಮುತ್ತಯ್ಯ ಹೆಗ್ಡೆಯವರ ಯಜಮಾನಿಕೆಯಲ್ಲಿ ನಿರಂತರ ಒಂಬತ್ತು ವರ್ಷಗಳ ಕಾಲ ಯಕ್ಷಗಾನ ತಿರುಗಾಟ ನಡೆಸಿದರು.

ಸಾಂಪ್ರದಾಯಿಕ ಯಕ್ಷಗಾನ ಚೌಕಟ್ಟಿನ ಒಳಗೆ ಹಂತಹಂತವಾಗಿ ಬೆಳೆದು ತನ್ನದೇ ಆದ ಶೈಲಿಯನ್ನು ರೂಪಿಸಿಕೊಂಡರು. ಆ ಬಳಿಕ ಶಿರಸಿ, ಬಗ್ವಾಡಿ, ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ ತಿರುಗಾಟ ನಡೆಸಿದ ಬಳಿಕ ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ಕಳೆದ ಆರು ವರ್ಷಗಳಿಂದ ಕಲಾಸೇವೆಗೈಯುತ್ತಿದ್ದಾರೆ. ಈಗ ಅವರಿಗೆ ಯಕ್ಷಮಾತೆಯ ಸೇವೆಯಲ್ಲಿ ಇಪ್ಪತ್ತೈದು ವರ್ಷಗಳನ್ನು ಪೂರೈಸಿದ ಸಂಭ್ರಮ.

ಪೌರಾಣಿಕ ಹಾಗೂ ನವ್ಯ ಪ್ರಸ೦ಗಗಳಿಗೂ ಸೈ

ಸರಳ, ಸಜ್ಜನಿಕೆಯವರಾದ ಶಂಕರ ದೇವಾಡಿಗರು ತೆರೆಮರೆಯ ಕಾಯಿಯಂತಿರುವ ನಿರಂತರ ಹಸನ್ಮುಖೀ ಹಾಗೂ ಚುರುಕಿನ ಕಲಾವಿದ. ಪೌರಾಣಿಕ ಸತ್ವಗಳನ್ನು ಮೈಗೂಡಿಸಿಕೊಂಡು ರಂಗಸ್ಥಳದಲ್ಲಿ ಹಿತಮಿತವಾಗಿ ಪ್ರಸಂಗದ ಮೌಲ್ಯಗಳನ್ನು ಎತ್ತಿಹಿಡಿದು ಅಭಿನಯಿಸುವ ಅವರ ಸುಭದ್ರೆ, ತಾರಾವಳಿ, ಮಾಲಿನಿ, ಚಂದ್ರಾವಳಿ, ಚಿತ್ರಾಂಗದೆ, ಸೀತೆ, ದಮಯಂತಿ ಮುಂತಾದ ಪಾತ್ರಗಳು ಯಶಸ್ವೀ ಪ್ರಸ್ತುತಿ ಎನಿಸಿವೆ. ರಂಗಪಂಚಮಿಯ ಶಶಿರೇಖೆ, ಪ್ರತಿಜ್ಞಾ ಪಲ್ಲವಿಯ ಬೆಳ್ಳಿ, ನೀಲ ಮೇಘ ಶ್ಯಾಮದ ನೀಲವೇಣಿ, ಶಿವಾನಿ ಭವಾನಿಯ ಶಿವಾನಿ, ಸಾವನಿ-ಪಾವನಿಯಲ್ಲಿ ಹಾಸ್ಯಪಾತ್ರವಾದ ಸರಸಿ, ಅಗ್ನಿಚರಿತ್ರಾದ ಲಕುಮಿ, ನಾಗವಲ್ಲಿಯ ಪಂಚಮಿ, ಶಿವರಂಜನಿಯ ನೇತ್ರಾ ಮೊದಲಾದ ಪಾತ್ರಗಳಲ್ಲಿ ಅಭಿನಯಿಸಿ ಹೊಸ ಕಾಲದ ಪ್ರಸಂಗಗಳ ಪಾತ್ರಗಳಿಗೂ ತಾವು ಸೈ ಎಂದು ತೋರಿಸಿಕೊಟ್ಟಿದ್ದಾರೆ.

ದಿಗ್ಗಜರ ಒಡನಾಟ

ಜಲವಳ್ಳಿ ವೆಂಕಟೇಶ್ವರ ರಾವ್‌, ಚಿಟ್ಟಾಣಿ ರಾಮಚಂದ್ರ ಹೆಗಡೆ, ನಗರ ಜಗನ್ನಾಥ ಶೆಟ್ಟಿ, ಬಳ್ಕೂರು ಕೃಷ್ಣ ಯಾಜಿ, ಸುಬ್ರಹ್ಮಣ್ಯ ಧಾರೇಶ್ವರ, ಭಾಸ್ಕರ ಜೋಶಿ, ರಾಮ ನಾಯಿರಿ, ಗೋಪಾಲ ಆಚಾರಿ, ಕುಂಜಾಲು ರಾಮಕೃಷ್ಣ, ಮೂರೂರು ವಿಷ್ಣು ಭಟ್‌ ಮುಂತಾದ ಮೇರು ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದು ಶಂಕರ ದೇವಾಡಿಗರ ಹೆಮ್ಮೆಯ ಅನುಭವ. ಪೌರಾಣಿಕ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಲು ಇಚ್ಛಿಸುವ ಇವರು ಭಾಗವತ ರಾಘವೇಂದ್ರ ಮಯ್ಯ ಮತ್ತು ಸುರೇಶ್‌ ಶೆಟ್ಟರೊಂದಿಗೆ ಅತಿ ಹೆಚ್ಚು ತಿರುಗಾಟ ಪೂರೈಸಿದ್ದಾರೆ.

ಯಕ್ಷಗಾನ ಕ್ಷೇತ್ರಕ್ಕೆ ಬಹಳ ದೊಡ್ಡ ಪರಂಪರೆ ಯಿದೆ. ಹಿಮ್ಮೇಳ-ಮುಮ್ಮೇಳಗಳ ಸಾಮರಸ್ಯ, ಕಲೆ-ಕಲಾವಿದರ ಸಾಂಗತ್ಯ, ಸಾಹಿತ್ಯ - ಪೂರಕಾಂಶ ಗಳ ಸಂತುಲನ, ರಂಗಸ್ಥಳ ಮತ್ತು ಪ್ರೇಕ್ಷಕರ ಅರ್ಥಪೂರ್ಣವಾದ ಹೃದಯ ಸಂವಾದಗಳಿದ್ದಾಗ ಮಾತ್ರ ಈ ಕಲೆಗೆ ಉಜ್ವಲ ಭವಿಷ್ಯವಿದೆ ಎನ್ನುವುದು ಶಂಕರ ದೇವಾಡಿಗರ ಖಚಿತ ಅಭಿಪ್ರಾಯ. ಕೊನೆತನಕ ಕಲಾಸೇವೆಯಲ್ಲಿ ತೊಡಗಿರಬೇಕೆನ್ನುವುದು ಇವರ ಹೃದಯದ ಹಂಬಲ.

ಉಳ್ಳೂರು ಶಂಕರ ದೇವಾಡಿಗ
ಜನನ : ಜೂನ್ 7, 1969
ಜನನ ಸ್ಥಳ : ಉಳ್ಳೂರು
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಮಾರಣಕಟ್ಟೆ, ಶಿರಸಿ, ಬಗ್ವಾಡಿ, ಅಮೃತೇಶ್ವರಿ, ಪೆರ್ಡೂರು, ಸಾಲಿಗ್ರಾಮ ಮೇಳಗಳಲ್ಲಿ 25 ವರ್ಷಗಳಿ೦ದ ಸ್ತ್ರೀವೇಷಧಾರಿಯಾಗಿ ಕಲಾಸೇವೆ.

ಕಲಾಸೇವೆಗೆ 25 ವರ್ಷ

ಶಂಕರ ದೇವಾಡಿಗರು ಪ್ರೇಕ್ಷಕರ ಮೆಚ್ಚುಗೆಯ ನುಡಿಗಳೇ ತಮಗೆ ಬಹುದೊಡ್ಡ ಗೌರವ ಎನ್ನುತ್ತಾರೆ. ತನ್ನ ಹುಟ್ಟೂರು ಉಳ್ಳೂರಿನಲ್ಲಿ ತುಂಬು ಅವಿಭಕ್ತ ಕುಟುಂಬದೊಂದಿಗೆ ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರೊಂದಿಗೆ ಸಂತೃಪ್ತ ಸಂಸಾರಿಯಾಗಿರುವ ಇವರು ಜೂನ್‌ 8ರಂದು ಉಡುಪಿಯ ಪಿ.ಪಿ.ಸಿ. ಸಭಾಂಗಣದಲ್ಲಿ ತನ್ನ ಕಲಾಸೇವೆಯ ರಜತ ಸಂಭ್ರಮದ ಪ್ರಯುಕ್ತ ಸಮ್ಮಾನ ಸ್ವೀಕರಿಸಿದ್ದಾರೆ.



****************



ಚಿತ್ರ ಕೃಪೆ : ರಾಮ್ ನರೇಶ್ ಮ೦ಚಿ




ಕೃಪೆ : http://udayavani.com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ