ಸಮರ್ಥ ಸಂಘಟಕ ಶಾಂತಾರಾಮ ಕುಡ್ವ
ಲೇಖಕರು : ತಾರಾನಾಥ ವರ್ಕಾಡಿ
ಬುಧವಾರ, ಜನವರಿ 20 , 2016
|
ಪತ್ರಿಕಾ ಬರಹ, ಸಾಹಿತ್ಯ ರಚನೆ, ನಾಟಕ ರಚನೆ, ಸಂಭಾಷಣೆಗಳ ಸೃಷ್ಟಿ, ಹಾಡು ಹೊಸೆಯುವುದು, ಆಟ ನೋಡುವುದು, ಕೂಟ ಕೇಳುವುದು ಮುಂತಾದ ಉತ್ತಮ ಹವ್ಯಾಸಗಳನ್ನಿರಿಸಿಕೊಂಡಿರುವ ಮೂಡಬಿದಿರೆಯ ಶಾಂತಾರಾಮ ಕುಡ್ವರು ಉತ್ತಮ ಕಲಾಸಂಘಟಕ. "ಯಕ್ಷ ಸಂಗಮ' ಎಂಬ ಸಂಸ್ಥೆ ಸ್ಥಾಪಿಸಿ ಮೂಡಬಿದಿರೆಯಲ್ಲಿ 16 ವರುಷಗಳಿಂದ ತಾಳಮದ್ದಳೆಗಳನ್ನು ಸಂಘಟಿಸುತ್ತಿರುವ ಕುಡ್ವರು ಅಶಕ್ತರಿಗೆ ನಿಧಿ ಸಮರ್ಪಣೆ, ಸಾಧಕರಿಗೆ ಸಮ್ಮಾನ ನೀಡುತ್ತಾ ಬಂದಿದ್ದಾರೆ. ಹಲವಾರು ಹಿರಿ-ಕಿರಿ-ಮರಿ ಮಾತುಗಾರರಿಗೆ ವೇದಿಕೆಯೊದಗಿಸಿದ್ದಾರೆ.
|
"ಯಕ್ಷೋಪಾಸನಂ' ಎಂಬ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿರುವ ಇವರು ಮೂಡಬಿದಿರೆಯಲ್ಲಿ "ವಾರದ ಕೂಟ' ಆಯೋಜಿಸುತ್ತಾ ತಾಳಮದ್ದಳೆಯ ಆಸಕ್ತರನ್ನು ಹುರಿದುಂಬಿಸುತ್ತಿದ್ದಾರೆ. ಕೊಂಕಣಿ ಭಾಷೆಯ ತಾಳಮದ್ದಳೆಗಳನ್ನು ಬೆಳೆಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ "ಯಕ್ಷಸಾರಸ್ವತ' ಎಂಬ ತಂಡ ಸ್ಥಾಪಿಸಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಮೂದಬಿದಿರೆಯ ಶ್ರೀ ವೆಂಕಟರಮಣ ಮತ್ತು ಹನೂಮಂತ ದೇವಸ್ಥಾನಗಳ ಮೊಕ್ತೇಸರರಾಗಿರುವ ಕುಡ್ವರು ಧಾರ್ಮಿಕ ಸಂಸ್ಥೆಗಳಲ್ಲೂ ಸದಾ ಸಕ್ರಿಯರು.
ಬಜ್ಪೆಯ ಉಮಾಲಕ್ಷ್ಮೀ-ಸುಂದರ ಕುಡ್ವ ದಂಪತಿ ಪುತ್ರ ಬಾಲ್ಯ ಶಿಕ್ಷಣ ಬಜಪೆಯಲ್ಲಿ ಪೂರೈಸಿ ಮೂಡಬಿದಿರೆಯ ಧವಳಾ ಕಾಲೇಜಿನಲ್ಲಿ ಬಿ.ಕಾಂ. ಪದವೀಧರರಾದರು. ಆದುದರಿಂದ ಇವರ ಉದ್ಯಮ ಮತ್ತು ವ್ಯವಹಾರ ಕ್ಷೇತ್ರ ಮೂಡಬಿದಿರೆ ಆಯಿತು. ವಿವಿಧ ಪತ್ರಿಕೆಗಳಿಗೆ ಲೇಖನ ಬರೆಯುತ್ತಿರುವ ಇವರು ಸಂಪಾದಕರಾಗಿ ಅನೇಕ ಸ್ಮರಣ ಸಂಚಿಕೆಗಳನ್ನು ಹೊರತಂದಿದ್ದಾರೆ. ತಾಳಮದ್ದಳೆಗಳಲ್ಲಿ ಅರ್ಥಧಾರಿಯಾಗಿ ಭಾಗವಹಿಸುವ ಶಾಂತಾರಾಮರು ಯಕ್ಷಗಾನ ಪ್ರದರ್ಶನಗಳಲ್ಲಿ ಸ್ವತಃ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಅರ್ಥಧಾರಿ, ವೇಷಧಾರಿಯಾಗಿ ಅಭಿಮಾನಿಗಳ ಮನ ಗೆದ್ದಿದ್ದಾರೆ, ಹಲವು ಪ್ರಸಂಗ ಪಾತ್ರಗಳಿಗೆ ಕೊಂಕಣಿಯಲ್ಲಿ ಅರ್ಥ ನಿರೂಪಣೆ ಮಾಡಿದ್ದಾರೆ. ನಾಟಕಗಳನ್ನು ಕೂಡ ರಚಿಸಿ, ನಿರ್ದೇಶಿಸಿದ್ದಾರೆ.
ಹಳೆಯ ಮತ್ತು ಹೊಸ ತಲೆಮಾರಿನ ಕಲಾವಿದರುಗಳ ಒಡನಾಟ ಹೊಂದಿರುವ ಶಾಂತಾರಾಮ ಕುಡ್ವರು, ಕಲಾವಿದರಿಗೆ ಸದಾ ನೆರವು ನೀಡುವ ಉದಾರಿ. ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರ ತನ್ನನ್ನು ತೊಡಗಿಸಿಕೊಂಡಿರುವ ಕುಡ್ವರಿಗೆ ಹಲವಾರು ಕಡೆ ಸಮ್ಮಾನ ಸಂದಿದೆ. ಪ್ರತೀ ವರುಷವೂ ಮಕರ ಸಂಕ್ರಮಣದಂದು ತಾಳಮದ್ದಳೆಯೊಂದನ್ನು ಆಯೋಜಿಸಿ ಕಲಾಸಾಧಕರೋರ್ವರಿಗೆ ಗೌರವಿಸುವ ಕಿನ್ನಿಗೋಳಿಯ "ಯಕ್ಷಲಹರಿ' ಸಂಸ್ಥೆ ಈ ವರುಷ ಶಾಂತಾರಾಮ ಕುಡ್ವರನ್ನೇ ಆರಿಸಿದೆ. ಮೂಡಬಿದಿರೆಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಯಕ್ಷ ಕಲಾಭಿಮಾನಿಗಳ ಪ್ರೀತಿಯ ಸಮ್ಮಾನವನ್ನು ನಿತ್ಯ ಸ್ವೀಕರಿಸುತ್ತಿರುವ ಶಾಂತಾರಾಮ ಕುಡ್ವರಿಗೆ ಸಂದ ಸರಿಯಾದ ಗೌರವವಿದು.
|
ಮೂಡಬಿದಿರೆ ಶಾಂತಾರಾಮ ಕುಡ್ವ |
 |
ಜನನ |
: |
ಫೆಬ್ರವರಿ 27, 1962 |
ಜನನ ಸ್ಥಳ |
: |
ಮೂಡಬಿದಿರೆ, ಮ೦ಗಳೂರು
ಕರ್ನಾಟಕ ರಾಜ್ಯ
|
ಕಲಾಸೇವೆ:
ಪತ್ರಿಕಾ ಬರಹ, ಸಾಹಿತ್ಯ ರಚನೆ, ನಾಟಕ ರಚನೆ, ಸಂಭಾಷಣೆಗಳ ಸೃಷ್ಟಿ, ಹಾಡು ಹೊಸೆಯುವುದು, ಆಟ ನೋಡುವುದು, ಕೂಟ ಕೇಳುವುದು ಹೀಗೆ ಹಲವಾರು ಸಾ೦ಸ್ಕೃತಿಕ ಕೃಷಿಯಲ್ಲಿ ತೊಡಗಿರುವ ಕುಡ್ವರು ಉತ್ತಮ ಕಲಾಸಂಘಟಕ. "ಯಕ್ಷ ಸಂಗಮ" ಎಂಬ ಸಂಸ್ಥೆ ಸ್ಥಾಪಿಸಿ ಮೂಡಬಿದಿರೆಯಲ್ಲಿ 16 ವರುಷಗಳಿಂದ ತಾಳಮದ್ದಳೆಗಳನ್ನು ಸಂಘಟಿಸುತ್ತಾ ಬಂದಿದ್ದಾರೆ.
|
|
|
**********************
ಕೃಪೆ :
http://www.udayavani.com
|
|
|