ರಜತ ಸಂಭ್ರಮದಲ್ಲಿ ``ಇಂದ್ರ ನಾಗ``
ಲೇಖಕರು : ರಾಘವೇಂದ್ರ ಅಡಿಗ ತೀರ್ಥಹಳ್ಳಿ
ಶನಿವಾರ, ಜುಲೈ 16 , 2016
|
ಜುಲೈ 16 , 2016
|
ರಜತ ಸಂಭ್ರಮದಲ್ಲಿ ``ಇಂದ್ರ ನಾಗ``
ಬೆ೦ಗಳೂರು :
ಶ್ರೀ ಮಣೂರು ವಾಸುದೇವ ಮಯ್ಯರವರು ರಚಿಸಿದ ‘ಇಂದ್ರ ನಾಗ’ ಯಕ್ಷಗಾನ ಪ್ರಸಂಗ, ಹಿಮಾಚಲ ಪ್ರದೇಶದ ಒಂದು ದೇವಾಲಯ 'ಧರ್ಮಶಾಲಾ' ಸ್ಥಳ ಪುರಾಣಕ್ಕೆ ಸಂಬಂಧಿಸಿದ ಕಥೆ. ಶ್ರೀ ಪೆರ್ಡೂರು ಮೇಳದಿಂದ ಆಗಸ್ಟ್ 8, 2015ರಂದು ಬೆಂಗಳೂರಿನಲ್ಲಿ ಅದ್ದೂರಿ ಯಶಸ್ವೀ ಪ್ರಥಮ ಪ್ರದರ್ಶನ ಕಂಡ ನಂತರ ಮೇಳದ ಪ್ರದರ್ಶನವಾಗಿ ಹೋದಲ್ಲೆಲ್ಲ ಯಕ್ಷ ಪ್ರೇಕ್ಷಕರ ಮನ ಗೆದ್ದು, ರಜತ ಸಂಭ್ರಮದತ್ತ ದಾಪುಗಾಲಿಡುತ್ತಿದೆ. ಶ್ರೀ ರಮೇಶ್ ಬೇಗಾರ್ ಶೃಂಗೇರಿ ಯವರ ರಂಗರೂಪ-ಸಂಯೋಜನೆ, ಪದ್ಯರಚನೆ ಶ್ರೀ ಪ್ರಸಾದ್ ಮೊಗೆಬೆಟ್ಟು ರವರದ್ದು, ದಕ್ಷ ನಿರ್ವಹಣೆ-ಭಾಗವತ ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆಯವರಿಂದ.
ಯಕ್ಷಗಾನ ಕಲೆಯನ್ನು ಉಳಿಸಿ-ಬೆಳೆಸುವ ಸೇವೆಯಲ್ಲಿ ನಿರತವಾಗಿರುವ 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ'ದ ಆಶ್ರಯದಲ್ಲಿ ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರಿಂದ ದಿನಾಂಕ 18.07.2016ರ ಸೋಮವಾರದಂದು ಬೆಂಗಳೂರಿನ ಜೆ ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ 'ಇಂದ್ರ ನಾಗ'ದ 26ನೇ ಪ್ರದರ್ಶನವನ್ನು ಶ್ರೀ ಕಾಳಿಂಗ ನಾವಡ ಪ್ರತಿಷ್ಥಾನ-ಶೃಂಗೇರಿಯ ಸಂಸ್ಥಾಪಕ, ಯಕ್ಷಕರ್ಮಿ-ಕಿರುತೆರೆ ನಿರ್ದೇಶಕ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ಆರ್ಯಭಟ ಪ್ರಶಸ್ತಿ ವಿಜೇತ ಶ್ರೀ ರಮೇಶ್ ಬೇಗಾರ್ ಶೃಂಗೇರಿಯರವರ ಸಾರಥ್ಯದ ಶ್ರೀ ಭಾರತೀ ತೀರ್ಥ ಸಾಂಸ್ಕೃತಿಕ ಜಾನಪದ ಅಧ್ಯಯನ ಕೇಂದ್ರ ಆಯೋಜಿಸಿದೆ. ಇದು ರಮೇಶ್ ಬೇಗಾರ್ ರವರ 30ನೇ ವರ್ಷದ ಯಕ್ಷಸಂಘಟನೆಯ ಪರ್ವಕಾಲದ ವಿನೂತನ ಆಯೋಜನೆ. ಈ ಸಂದರ್ಭದಲ್ಲಿ ಕಲಾವಿದರನ್ನು ಗೌರವಿಸಿ ಸನ್ಮಾನಿಸಲಾಗುವುದು.
ಶ್ರೀಮತಿ ಪುಷ್ಪಾ ವಿ ಮಯ್ಯ ಹಾಗೂ ಶ್ರೀ ಮಣೂರು ವಾಸುದೇವ ಮಯ್ಯ ರವರ ಸಾರಥ್ಯದ 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ'ವು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವತ್ತ ಕಾರ್ಯೋನ್ಮುಖವಾಗಿದ್ದು ಈಗಾಗಲೇ ಹಲವಾರು ಕಲಾವಿದರನ್ನು ಗುರುತಿಸಿ ಗೌರವಿಸಿದೆ. ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿ ಯಕ್ಷರಸಿಕರ ಮನದುಂಬುವಂತೆ ಮಾಡಿದೆ. ಕಲಾವಿದರ ಹಾಗೂ ಪ್ರೇಕ್ಷಕರ ಹಿತಚಿಂತನೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ', ಇದೀಗ 'ಇಂದ್ರ ನಾಗ'ದ ರಜತೋತ್ಸವಕ್ಕೆ ಹೆಗಲು ನೀಡಿದೆ.
ಈ ಬಾರಿ ಭಾರತದ ಪುರಾತನ ಕಲೆ ಧನುರ್ವಿದ್ಯೆಯ ಪ್ರಾತ್ಯಕ್ಷಿಕ ಸಾಕ್ಷಾತ್ ಪ್ರದರ್ಶನವನ್ನು ಅಳವಡಿಸಿದೆ ! ಮತ್ಸ್ಯಯಂತ್ರ ಬೇಧನ, ಶಬ್ಧವೇದಿ ವಿದ್ಯೆ, ಸಪ್ತ ತಾಳಾವೃಕ್ಷ ಛೇಧನ, ಸರ್ವಾಂಗಾಸನ ಬಾಣಪ್ರಯೋಗ... ಮುಂತಾದವುಗಳನ್ನು ಪ್ರತ್ಯಕ್ಷ ತೋರಿಸಬಲ್ಲ ಭಾರತದ ಏಕೈಕ ಧನುರ್ವಿದ್ಯಾ ಪ್ರವೀಣ ಆಂಧ್ರಪ್ರದೇಶದ ಲಿಂಗಂಗುಂಟ್ಳು ಸುಬ್ಬಾರಾವ್ ಪ್ರದರ್ಶಿಸಲಿದ್ದಾರೆ. ವಿದ್ವಾನ್ ದತ್ತಮೂರ್ತಿ ಭಟ್ ಇವರ ಪರಿಕಲ್ಪನೆ ಮತ್ತು ಸ್ವತಃ ವಿವರಣೆಯ ಸೊಗಸಿನೊಂದಿಗೆ ಈ ಐತಿಹಾಸಿಕ ವಿದ್ಯಮಾನ ಈ ಯಕ್ಷಗಾನ ಪ್ರದರ್ಶನದಲ್ಲಿ ನಡೆಯಲಿದೆ. ಧನುರ್ವಿದ್ಯಾ ಕಲೆಯನ್ನು ಗುರುಕುಲ ಮಾದರಿಯಲ್ಲಿ ಯಕ್ಷಗಾನಕ್ಕೆ ಪರಿಚಯಿಸಿದ ಕೀರ್ತಿ ವಿದ್ವಾನ್ ದತ್ತಮೂರ್ತಿ ಭಟ್ ರವರಿಗೆ ಸಲ್ಲುತ್ತದೆ. ಪ್ರೇಕ್ಷಕರಿಗೆ ಯಕ್ಷಗಾನದ ನೆಪದಲ್ಲಿ ಬಹು ಅಪರೂಪದ ಮತ್ತು ಜೀವಮಾನದಲ್ಲಿ ಮರೆಯಲಾಗದ ನೆನಪನ್ನು ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಅಚ್ಚಾಗುವುದರಲ್ಲಿ ಸಂಶಯವಿಲ್ಲ.
ಅತಿಥಿ ಕಲಾವಿದರಾದ ತೀರ್ಥಹಳ್ಳಿ ಗೋಪಾಲ ಆಚಾರ್ ಹಾಗೂ ಸೀತಾರಾಮ ಕುಮಾರ್ ಕಟೀಲು, ಶ್ರೀ ಪೆರ್ಡೂರು ಮೇಳದ ಕಲಾವಿದರಾದ ರಾಘವೇಂದ್ರ ಆಚಾರ್ ಜನ್ಸಾಲೆ, ಬ್ರಹ್ಮೂರು ಶಂಕರ ಭಟ್, ಸುನಿಲ್ ಭಂಡಾರಿ ಕಡತೋಕ, ಶ್ರೀನಿವಾಸ ಪ್ರಭು, ಥಂಡಿಮನೆ ಶ್ರೀಪಾದ ಹೆಗಡೆ, ಕಡಬಾಳ ಉದಯ ಹೆಗಡೆ, ನೀಲ್ಕೋಡು ಶಂಕರ ಹೆಗಡೆ, ರವೀಂದ್ರ ದೇವಾಡಿಗ, ವಿಶ್ವನಾಥ ಆಚಾರ್ಯ ತೊಂಬಟ್ಟು, ಕಿರಾಡಿ ಪ್ರಕಾಶ, ವಿಜಯ ಗಾಣಿಗ ಮುಂತಾದ ಕಲಾವಿದರು ಬಣ್ಣ ಹಚ್ಚಲಿದ್ದಾರೆ.
ಸಂಪರ್ಕ-ಜಗನ್ನಾಥ ಹೆಗಡೆ-99008 08109, ರಮೇಶ್ ಬೇಗಾರ್ ಶೃಂಗೇರಿ - 94481 01708
|
|
|