ನವೆಂಬರ್ ೧೯೮೮ ರಲ್ಲಿ ಬಹ್ರೈನ್ ನಲ್ಲಿ ನಡೆದ ಕನ್ನಡ ಕೂಟದ ಸಮಾರಂಭದ ಯಕ್ಷಗಾನದಲ್ಲಿ ಶ್ರೀ ಕಾಳಿಂಗ ನಾವಡರ ಭಾಗವತಿಕೆ ಎಲ್ಲರ ಮನ ಸೂರೆಗೊಂಡಿತ್ತು.ಶ್ರೀ ಕಾಳಿಂಗ ನಾವಡರು ಹಾಗೂ ಚಿಟ್ಟಾಣಿ ರಾಮಚಂದ್ರ ಹೆಗ್ಗಡೆಯವರು, ಆ ಕಾಲದಲ್ಲೇ ಮುಂಬಯಿಗೆ ಹೋಗಿ, ವರ್ಷವೊಂದರಲ್ಲಿ 'ಭಸ್ಮಾಸುರ ಮೋಹಿನಿ' ಪ್ರಸಂಗವೊಂದನ್ನೇ ನಲವತ್ತಕ್ಕೂ ಹೆಚ್ಚು ಬಾರಿ ಆಡಿ, ಯಕ್ಷಗಾನಕ್ಕೆ ಅಷ್ಟೇನೂ ಆಸಕ್ತಿಯಿಲ್ಲದಿದ್ದ ಮುಂಬಯಿಯಲ್ಲಿ ಯಕ್ಷಗಾನಕ್ಕೊಂದು ಸ್ಪಷ್ಟ ನೆಲೆ ಕಲ್ಪಿಸಿದ ಕೀರ್ತಿ ಇವರಿಬ್ಬರದು.ನಾವಡರ 'ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ.........', 'ನೀಲ ಗಗನದೊಳು ಮೇಘಗಳ ಕಂಡಾಗಲೇ ನವಿಲು ಕುಣಿಯುತಿದೆ......' ಮುಂತಾದ ಪದ್ಯಗಳನ್ನು ಕೇಳಿದಾಗ ಇಂದಿಗೂ ಮೈ ನವಿರೇಳುತ್ತದೆ.
ರೇವತಿ, ಕಲಾವತಿ, ಚಾಂದ್, ಬಿಹಾಗ್ ಮುಂತಾದ ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿ, ತಮ್ಮ ಕಂಠಸಿರಿಯಿಂದ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆದ ನಾವುಡರು 'ಅಮೃತಮತಿ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ, ಭಾಗ್ಯಶ್ರೀ, ನಾಗಶ್ರೀ' ಮುಂತಾದ ಪ್ರಸಿದ್ದ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿದವರು. 1990ರಲ್ಲಿ ಕರ್ನಾಟಕ ಸರಕಾರ ಮರಣೋತ್ತರವಾಗಿ 'ರಾಜ್ಯೋತ್ಸವ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದೆ. ಹಾಗೆಯೇ ಯಕ್ಷಕಲಾರಸಿಕರಿಂದ 'ಕರಾವಳಿ ಕೋಗಿಲೆ', 'ರಸರಾಗ ಚಕ್ರವರ್ತಿ' ಮುಂತಾದ ಬಿರುದುಗಳು, ಸನ್ಮಾನಗಳು, ಪ್ರಶಸ್ತಿಗಳು ನಾವಡರಿಗೆ ಸಂದಿವೆ.
ಯಕ್ಷಗಾನ ಹಾಗೂ ನಾಟಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ "ಕಲಾ ಕದಂಬ ಆರ್ಟ್ ಸೆಂಟರ್" ಸಂಸ್ಥೆ ಯಕ್ಷ ಸಾಧಕರಿಗೆ ಪ್ರತಿ ವರ್ಷ ‘ಕಾಳಿಂಗ ನಾವಡ’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಬಾಲ್ಯ ಮತ್ತು ಶಿಕ್ಷಣ
"ಗಾನ ಕೋಗಿಲೆ" ಕಾಳಿಂಗ ನಾವಡರು (ಆಡು ಬಾಷೆಯಲ್ಲಿ ನಾವುಡ) ಹುಟ್ಟಿದ್ದು ಜೂನ್ ೬ ೧೯೫೮ನೇ ಇಸವಿಯಲ್ಲಿ. ಸಾಲಿಗ್ರಾಮ ಸಮೀಪದ ಗುಂಡ್ಮಿ ಅನ್ನುವ ಪುಟ್ಟ ಹಳ್ಳಿಯಲ್ಲಿ, ರಾಮಚಂದ್ರ ನಾವುಡ ಪದ್ಮಾವತಿ ದಂಪತಿಗಳ ಐದನೇ ಕೂಸು. ತಂದೆ ರಾಮಚಂದ್ರ ನಾವಡರು ಕೂಡಾ ಆ ಕಾಲದ ಹೆಸರಾಂತ ಭಾಗವತರು. ಹಾಗಾಗಿ ಸಹಜವಾಗಿಯೇ ನಾವುಡರಿಗೆ ಬಾಲ್ಯದಲ್ಲಿಯೇ ಯಕ್ಷಗಾನದ ಕುರಿತು ಆಸಕ್ತಿ ಮೂಡಿಸುವ ಪೂರಕ ರಂಗಸ್ಥಳವು ಅವರ ಮನೆಯಲ್ಲಿಯೇ ಸಿದ್ಧಿಸಿತ್ತು.
|
ಕಾಳಿಂಗ ನಾವಡ |
 |
ಜನನ ದಿನಾ೦ಕ |
: |
ಜೂನ್ 6, 1958 |
ಜನನ ಸ್ಥಳ |
: |
ಗುಂಡ್ಮಿ , ಸಾಲಿಗ್ರಾಮ , ಉಡುಪಿ ಜಿಲ್ಲೆ ಕರ್ನಾಟಕ ರಾಜ್ಯ |
ಕಲಾಸೇವೆ |
: |
ಕೋಟ ಶ್ರೀ ಅಮೃತೇಶ್ವರಿ ಮೇಳ, ಪೆರ್ಡೂರಿನ ವಿಜಯಶ್ರೀ ಮೇಳ, ಸಾಲಿಗ್ರಾಮ ಮೇಳದಲ್ಲಿ ಭಾಗವತರಾಗಿ ದುಡಿಮೆ. |
ಪ್ರಶಸ್ತಿಗಳು |
: |
ಮರಣೋತ್ತರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1990), |
ಮರಣ ದಿನಾ೦ಕ |
: |
ಮೇ 27, 1990 |
|
|
ತಂದೆ ರಾಮಚಂದ್ರ ನಾವಡರಿಂದ ಎಳೆಯ ವಯಸ್ಸಿನಲ್ಲಿಯೇ ಭಾಗವತಿಕೆಯ ಪಟ್ಟುಗಳನು ಕರತಲಾಮಲಕ ಮಾಡಿಕೊಂಡ ನಾವುಡರಿಗೆ ಮನೆಯೇ ಮೊದಲ ಪಾಠಶಾಲೆ ತಂದೆಯೇ ಮೊದಲ ಗುರು. ಜನ್ಮಜಾತವಾಗಿ ಬಂದ ಪ್ರತಿಭೆಗೆ ಹಾಗು ಅವರಲ್ಲಿದ್ದ ಆಸಕ್ತಿಗೆ ನೀರೆರೆದ ಪೋಷಕರು ಅವರನ್ನು ಆ ಕಾಲದ ಸುಪ್ರಸಿದ್ಧ ಭಾಗವತರಾದ ನಾರಾಯಣ ಉಪ್ಪೂರರ ಗರಡಿಯಲ್ಲಿ ಬಿಟ್ಟರು. ಈ ಎಳೆಯ ತರುಣ ತಮ್ಮ ಪರಂಪರಾಗತ ಭಾಗವತಿಕೆಯನ್ನು ಮುಂದುವರಿಸಲು ಸಮರ್ಥನೆಂದು ಬಹುಬೇಗನೆ ಮನಗಂಡ ಉಪ್ಪೂರರು ತಮ್ಮ ಅನುಭವವನ್ನೆಲ್ಲ ತಮ್ಮ ಸಾಲಿಗ್ರಾಮದ ಹಂಗಾರಕಟ್ಟೆಯ 'ಯಕ್ಷ ಕಲಾ ಕೇಂದ್ರ-ಭಾಗವತ ತರಬೇತಿ ಕೇಂದ್ರ'ದಲ್ಲಿ ಕಾಳಿಂಗ ನಾವಡರಿಗೆ ಶಿಕ್ಷಣ ನೀಡಿದರು. ಶ್ರೀ ನಾರಣಪ್ಪ ಉಪ್ಪೂರುರವರ ಜೊತೆಗೂಡಿ, ೧೯೭೨ ರಲ್ಲಿ, ಅಂದರೆ ಕೇವಲ ೧೪ ನೇ ವಯಸ್ಸಿನಲ್ಲಿ ಮುಖ್ಯ ಭಾಗವತರಾಗಿ ಕೋಟ ಶ್ರೀ ಅಮೃತೇಶ್ವರಿ ಮೇಳದಿಂದ ತಮ್ಮ ಯಕ್ಷಕಲಾ ಸೇವೆ ಆರಂಭಿಸಿದರು.
ವೃತ್ತಿ ಹಾಗೂ ಕಲಾಸೇವೆ
ಉಪ್ಪೂರರ ತಂಡವನ್ನು ಸೇರಿದ ನಾವಡರು ಸರಿಸುಮಾರು ೫-೬ ವರ್ಷಗಳ ಕಾಲ ಅವರ ಜೊತೆಯಲ್ಲಿಯೇ ತಿರುಗಾಟವನ್ನು ಮುಂದುವರೆಸಿದರು. ೧೯೭೭ರಲ್ಲಿ ಪೆರ್ಡೂರಿನ ವಿಜಯಶ್ರೀ ಮೇಳಕ್ಕೆ ಭಾಗವತರಾಗಿ ಸೇರ್ಪಡೆಗೊಂಡ ನಾವುಡರು ಬಹುಬೇಗನೆ ಜನಮನವನ್ನು ಸೂರೆಗೊಂಡರು, ನಾವಡರ ಭಾಗವತಿಕೆ ಜನಜನಿತವಾಯ್ತು. ಅಲ್ಲಿಂದ ಮುಂದೆ ಸಾಲಿಗ್ರಾಮ ಮೇಳಕ್ಕೆ ಪದಾರ್ಪಣೆ ಮಾಡಿದ ನಾವುಡರು ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಹೋದಹೋದೆಡೆಯೆಲ್ಲ ಅಭಿಮಾನಿಗಳು ಸೃಷ್ಟಿಯಾದರು, ಯಕ್ಷಪ್ರೇಮಿಗಳು ಹುಚ್ಚೆದ್ದುಹೋದರು, ನೋಡನೋಡುತ್ತಿರುವಂತೆಯೇ ಕಾಳಿಂಗ ನಾವುಡರ ಕೀರ್ತಿ ಪತಾಕೆ ಎಲ್ಲೆಡೆಯೂ ರಾರಾಜಿಸತೊಡಗಿತು, ಕರಾವಳಿ ಕರ್ನಾಟಕದ ತುಂಬೆಲ್ಲಾ ಕಾಳಿಂಗ ನಾವಡರ ಕಂಚಿನ ಕಂಠದ ಘಂಟಾನಿನಾದವು ಕೇಳಿಬರತೊಡಗಿತು.
ತಮ್ಮ ಮೂವತ್ತೆರಡನೆಯ ವಯಸ್ಸಿಗೇ ಸಮಕಾಲೀನ ಭಾಗವತರ್ಯಾರೂ ತಲುಪಲಾಗದ ಎತ್ತರದ ಪೀಠದಲ್ಲಿ ನಾವಡರು ವಿರಾಜಮಾನರಾದರು.೧೯೮೩ರಲ್ಲಿ ಶ್ರೀಮತಿ ವಿಜಯಶ್ರೀಯವರನ್ನು ಮದುವೆಯಾದ ಕಾಳಿಂಗ ನಾವಡರಿಗೆ "ಆಗ್ನೇಯ ನಾವಡ" ಎಂಬ ಮಗನಿದ್ದಾರೆ.
ಮೇ ೨೭ ೧೯೯೦ ನೇ ಇಸವಿಯಲ್ಲಿ ೩೨ರ ಹರೆಯದ ತರುಣ ಗಾನ ಕೋಗಿಲೆಯ ಹಾಡು ಸ್ತಬ್ಧವಾಯಿತು. ರಸ್ತೆ ಅಪಘಾತವೊಂದರಲ್ಲಿ ನಾವಡರು ವಿಧಿವಶರಾದಾಗ ಯಕ್ಷಗಾನಲೋಕದ ಸುವರ್ಣಯುಗವೊಂದು ಅಂತ್ಯವಾಯಿತು. ಯಕ್ಷರಸಿಕರ ಪಾಲಿಗೆ ಬರಸಿಡಿಲೆರಗಿದಂತೆ ಬಂದಪ್ಪಳಿಸಿದ ಈ ದುರಂತವಾರ್ತೆಯನ್ನು ಕೇಳಿ ಕ್ಷಣಾರ್ಧದಲ್ಲಿ ಇಡೀ ಕರಾವಳಿಯ ಕಡಲತೀರವು ಶೋಕಸಾಗರದಲ್ಲಿ ಮುಳುಗಿತು. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿ ತೆರಳಿದ "ಕರಾವಳಿಯ ಗಾನಕೋಗಿಲೆ" ಗುಂಡ್ಮಿ ಕಾಳಿಂಗ ನಾವಡರಿಗೆ "ನಮನ".
ಕೃಪೆ : http://kn.wikipedia.com
|