ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷರಂಗದ ಕೌರವ : ಗೋಡೆ ನಾರಾಯಣ ಹೆಗಡೆ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ಒಕ್ಟೋಬರ್ 2 , 2013
|
ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಗದಾಯುದ್ದ ಪ್ರಸಂಗದ ಕೌರವ ಎಂದಾಗ ತಟ್ಟನೆ ನೆನಪಾಗುವುದು ಆ ಪಾತ್ರಕ್ಕೊಂದು ಹೊಸ ಆಯಾಮ ನೀಡಿದ ಗೋಡೆ ನಾರಾಯಣ ಹೆಗಡೆಯವರ ಹೆಸರು. ಕವಿರತ್ನ ರನ್ನನು ಚಿತ್ರಿಸಿದ ಕೌರವನ ಪಾತ್ರಕ್ಕೆ ಯಕ್ಷರಂಗದಲ್ಲಿ ಅದೇ ಚಿತ್ರಣವನ್ನು ನೀಡಿದ ಕೀರ್ತಿ ಗೋಡೆಯವರಿಗೆ ಸಲ್ಲಬೇಕು. ದೀರೋದ್ದಾತ ನಾಯಕನಾದ ಛಲದಂಕ ಚಕ್ರೇಶ್ವರನನ್ನು ಮಹಾಭಾರತದ ನಾಯಕನನ್ನಾಗಿ ಯಕ್ಷಗಾನದಲ್ಲಿ ಗೋಡೆಯವರು ಚಿತ್ರಿಸಿದ ರೀತಿಯೇ ಒಂದು ಇತಿಹಾಸ. ಅದರಿಂದಲೇ ಎಪ್ಪತ್ತರ ದಶಕದಲ್ಲಿ ದಿ. ಕಾಳಿಂಗ ನಾವಡರ ಭಾಗವತಿಕೆಯಲ್ಲಿ ಗೋಡೆಯವರ ಗದಾಯುದ್ದ ಪ್ರಸಂಗದ ಕೌರವನ ಅರ್ಥಗಾರಿಕೆಯಿರುವ ದ್ವನಿಸುರುಳಿ ದಾಖಲೆಯ ಮಾರಾಟ ಕಂಡಿದೆ.
|
ಕೇವಲ ಕೌರವನಷ್ಟೆ ಅಲ್ಲ. ಬ್ರಹ್ಮಕಪಾಲದ ಬ್ರಹ್ಮ. ಮಹಾಬ್ರಾಹ್ಮಣದ ತ್ರಿಶಂಕು, ಕೀಚಕ ವದೆಯ ವಲಲ, ಚಂದ್ರಹಾಸ ಚರಿತ್ರೆಯ ಚಂದ್ರಹಾಸ, ಬಾಸವತಿಯ ದುಷ್ಟಕೇತು, ಮುಂತಾದ ಪಾತ್ರಗಳು ಅವರದ್ದೆ ಸೃಷ್ಟಿಯೆಂಬಷ್ಟು ಅವರಿಗೆ ಖ್ಯಾತಿಯನ್ನು ತಂದು ಕೊಟ್ಟಿತ್ತು. ಆಕರ್ಷಕ ಅಂಗ ಸೌಷ್ಟವ, ತೂಕದ ಮಾತು, ನಾಜೂಕು ಕುಣಿತ ಪಾತ್ರಪರಿಕಲ್ಪಣೆ, ಶ್ರುತಿಬದ್ದತೆ, ಮುಂತಾದ ವಿಶಿಷ್ಟತೆಗಳಿಂದ ಪ್ರೇಕ್ಷಕರ ಹೃನ್ಮನಗಳಲ್ಲಿ ಅಚ್ಚಳಿಯದ ಸ್ಥಾನಗಳಿಸಿರುವ ಹೆಗಡೆಯವರು ಗೋಡೆ ಎಂಬ ಅನ್ವರ್ಥನಾಮದಿಂದ ಮನೆಮಾತಾಗಿದ್ದಾರೆ. ಎಪ್ಪತೊಂದರ ಹರೆಯದ ಇವರು ಇಂದಿಗೂ ವೇಷದರಿಸಿದರೆ ಯುವಕರು ನಾಚಬೇಕು.
ಬಾಲ್ಯ ಮತ್ತು ಶಿಕ್ಷಣ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಲಗಾರ ಎಂಬ ಕುಗ್ರಾಮದಲ್ಲಿ ಗೋಡೆ ತಿಮ್ಮಯ್ಯ ಹೆಗಡೆ ಹಾಗೂ ಗೌರಮ್ಮ ದಂಪತಿ ಪುತ್ರನಾಗಿ 1940ರ ಫೆಬ್ರುವರಿ 15 ರಂದು ಜನಿಸಿದ ನಾರಾಯಣ ಹೆಗಡೆ ಕಲಿತಿದ್ದು ಐದನೇ ತರಗತಿಯ ತನಕ ಮಾತ್ರ. ಮೂಲತ ಯಕ್ಷಗಾನದಲ್ಲಿ ಅಭಿರುಚಿಯುಳ್ಳ ತಾಯಿಯಿಂದ ಪ್ರೇರೆಪಿತರಾಗಿ ಈ ಕಲೆಯಲ್ಲಿ ಆಸಕ್ತಿ ಹೊಂದಿದರು. ಗೋಡೆಯವರು ಬೆಳೆದದ್ದು ಶಿರಳಿಗೆಯ ಸೋದರಮಾವ ಗಣೇಶಯ್ಯನವರ ಮನೆಯಲ್ಲಿ. ಆಗ ಅಲ್ಲಿ ನೆಡೆಯುತ್ತಿದ್ದ ತಾಳ ಮದ್ದಳೆ ಕಾರ್ಯಕ್ರಮದಲ್ಲಿ ಭಾಗವತರಾದ ಕೊಳಗಿ ಸೀತಾರಾಮರ ಸಂಪರ್ಕದಿಂದ ಇವರು ಯಕ್ಷಗಾನ ಕ್ಷೇತ್ರಕ್ಕೆ ಕಾಲಿಡುವಂತಾಯಿತು. ಅವರಿಂದಲೇ ಯಕ್ಷಗಾನದ ತಾಳ ಲಯದ ಪರಿಚಯವಾಯಿತು. ನಂತರ ಹಣಜಿಬೈಲು ಮೇಳದಲ್ಲಿ ಸ್ತ್ರೀವೇಷದಾರಿಯಾಗಿ ಸೇರಿಕೊಂಡರು ಅಲ್ಲಿ ಅಣ್ಣಪ್ಪ ಹೆಗಡೆಯವರ ಎರಡನೆ ವೇಷ, ಚಾಡಿಕೊಳಗಿ ತಿಮ್ಮಯ್ಯರ ಪುರುಷ ವೇಷ, ಹಾಗು ಸುಬ್ರಾಯ ಭಟ್ಟರ ಒಡನಾಟದಿಂದ ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು.
ವೃತ್ತಿ ಹಾಗೂ ಕಲಾಸೇವೆ
ಅವರು ನಿರ್ವಹಿಸಿದ ವಾಲಿವಧೆಯ ತಾರೆ, ಸುಧನ್ವಾರ್ಜುನದ ಪ್ರಭಾವತಿ, ರುಕ್ಮಾಂಗದ ಚರಿತ್ರೆಯ ಮೋಹಿನಿ, ನಳಚರಿತ್ರೆಯ ದಮಯಂತಿ, ಕೀಚಕವಧೆಯ ಸೈರೇಂದ್ರಿ ಮುಂತಾದ ಪಾತ್ರಗಳು ಸ್ತ್ರೀವೇಷದಾರಿಯಾಗಿ ಇವರ ವ್ಯಕ್ತಿತ್ವಕ್ಕೆ ಸಾಣೆ ಹಿಡಿಯಿತು. ನಂತರ ಸ್ತ್ರೀವೇಷದಾರಿಯಾಗಿ ಕೊಳಗಿ ಮೇಳ ಸೇರಿದ ಇವರಿಗೆ ಅಲ್ಲಿ ಕೊಳಗಿ ಅನಂತ ಹೆಗಡೆ ರಾಮಕೃಷ್ಣ ಭಟ್ಟರ ಒಡನಾಟ ದೊರೆಯಿತು. ಅಲ್ಲಿ ಅವರ ಮೀನಾಕ್ಷಿ, ದ್ರೌಪದಿ, ದಾಕ್ಷಾಯಿಣಿ ಮುಂತಾದ ಪಾತ್ರಗಳು ಅಪಾರ ಜನಮೆಚ್ಚುಗೆ ಗಳಿಸಿತು. ಅಲ್ಲಿಂದಲೇ ಅತಿಥಿ ಕಲಾವಿದರಾಗಿ ಬಚ್ಚಗಾರು, ಬೇಳೂರು ಮುಂತಾದ ಮೇಳಗಳಲ್ಲು ತಮ್ಮ ಪ್ರತಿಭೆಯನ್ನು ಮೆರೆಸಿದರು. ಇವರು ಒಮ್ಮೆ ಕೊಳಗಿ ಮೇಳದಲ್ಲಿದ್ದಾಗ ಸ್ನೇಹಿತರ ಒಡನಾಟಕ್ಕೆ ಮಣಿದು ಗದಾಯುದ್ದದ ಕೌರವನ ಪಾತ್ರ ನಿರ್ವಹಿಸಿದರು. ಮುಂದೆ ಅದೇ ಅವರಿಗೆ ಹೊಸ ಇಮೇಜಿನೋಂದಿಗೆ ಸ್ಟಾರ್ ವ್ಯಾಲ್ಯು ತಂದು ಕೊಟ್ಟಿತು. ಹಿರಿಯ ಕಲಾವಿದ ಕೆರೆಮನೆ ಶಿವರಾಮ ಹೆಗಡೆಯವರು ಅವರನ್ನು ಇಡಗುಂಜಿ ಮೇಳಕ್ಕೆ ಅತಿಥಿ ಕಲಾವಿದರನ್ನಾಗಿ ಬರಮಾಡಿಕೊಂಡರು. ನಂತರ ಸೀತಾರಾಮಾಂಜನೇಯ ಯಕ್ಷಗಾನ ಮೇಳದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತು ಜಲವಳ್ಳಿ ವೆಂಕಟೇಶ ರಾವ್ ರೊಂದಿಗೆ ಸಹಕಲಾವಿದರಾಗಿ ಸೇರಿಕೊಂಡರು.
ಉತ್ತರ ಕನ್ನಡದಲ್ಲಿ ಮೆರೆಯುತಿದ್ದ ಈ ಅಪೂರ್ವ ಪ್ರತಿಬೆಯನ್ನು ಗಮನಿಸಿದ ಕೋಟ ಅಮೃತೇಶ್ವರಿ ಮೇಳದ ಯಜಮಾನ ಶ್ರೀದರ ಹಂದೆಯವರು ಅವರನ್ನು ಆ ಮೇಳಕ್ಕೆ ಬರಮಾಡಿ ಕೊಂಡರು. ಪುರುಷ ಪಾತ್ರದಾರಿಯಾಗಿ ಆ ಮೇಳ ಸೇರಿಕೊಂಡ ಅವರಿಗೆ ಅಲ್ಲಿ ಚಿಟ್ಟಾಣಿ, ನಗರ ಜಗನ್ನಾಥ ಶೆಟ್ಟಿ, ವಾಸುದೇವ ಸಾಮಗ, ಕೋಟ ವೈಕುಂಠ, ಅಲ್ಲದೆ ಅಪೂರ್ವ ಹಿಮ್ಮೇಳವಾದ ನಾರ್ಣಪ್ಪ ಉಪ್ಪೂರ್, ಬೇಳಂಜೆ ತಿಮ್ಮಪ್ಪ ನಾಯ್ಕ, ಹೊಳೆಗದ್ದೆ ಗಜಾನನ ಭಂಡಾರಿಯವರ ಸಾಥಿ ದೊರೆಯಿತು. ಅಲ್ಲಿನ ಹೊಸ ಪ್ರಸಂಗಗಳಾದ ಮಾಯ ಮೃಗಾವತಿ, ಅಮಾತ್ಯನಂದಿನಿ, ರಾಜಾ ಬ್ರಹದ್ರತ, ಯಕ್ಷಲೋಕ ವಿಜಯ ಮುಂತಾದ ಪ್ರಸಂಗಗಳಲ್ಲಿ ಅಮೋಘ ಅಭಿನಯ ನೀಡಿದರು.
|
ಗೋಡೆ ನಾರಾಯಣ ಹೆಗಡೆ |
 |
ಜನನ |
: |
ಫೆಬ್ರುವರಿ 15, 1940 |
ಜನನ ಸ್ಥಳ |
: |
ಕಲಗಾರ ಗ್ರಾಮ
ಸಿದ್ದಾಪುರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ |
: |
ವೇಷಧಾರಿಯಾಗಿ 60 ವರ್ಷಗಳಿ೦ದ ಹಲವು ಮೇಳದಲ್ಲಿ ದುಡಿಮೆ. |
ಪ್ರಶಸ್ತಿಗಳು:
- 2012ದಲ್ಲಿ ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ
- 1999ರಲ್ಲಿ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
- ಉಡುಪಿಯ ರಾಮ-ವಿಠ್ಠಲ ಪ್ರಶಸ್ತಿ
- ಉಡುಪಿ ಕಲಾರಂಗ ಪ್ರಶಸ್ತಿ
- ಸ್ವರ್ಣವಲ್ಲೆ ಶ್ರೀಗಳು ``ಯಕ್ಷಕಲಾ ರತ್ನ`` ಬಿರುದು
- ಬಹರೇನ್ನ ಕನ್ನಡ ಸಂಘ ಅವರನ್ನು ಸನ್ಮಾನ
- ಅಖಿಲ ಹವ್ಯಕ ಮಹಾಸಭಾ ಸನ್ಮಾನ
- ಗೋಡೆ ಚಿತ್ತಾರ, ಗೋಡೆ ಗಾರುಡಿ, ಮುಂತಾದ ಅಭಿನಂದನ ಗ್ರಂಥಗಳು ಪ್ರಕಟವಾಗಿವೆ.
- ಹಲವು ಆಡಿಯೋ-ವಿಡಿಯೋ ಧ್ವನಿಮುದ್ರಣಗಳು ಆಗಿವೆ.
- ಆಕಾಶವಾಣಿ, ದೂರದರ್ಶನಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ.
|
|
|
1973ರಲ್ಲಿ ಕೆರೆಮನೆ ಶಂಭು ಹೆಗಡೆಯವರ ಇಡಗುಂಜಿ ಮೇಳ ಸೇರಿದ ಇವರು ಅಲ್ಲಿ ಕೆರೆಮನೆ ಮಹಾಬಲ ಹೆಗಡೆ, ಗಜಾನನ ಹೆಗಡೆ, ಬಳ್ಕೂರು ಕೃಷ್ಣಯಾಜಿ ಮುಂತಾದವರ ಒಡನಾಡೀಯಾದ ಇವರು ಅಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಬ್ರಹ್ಮಕಪಾಲದ ಬ್ರಹ್ಮ. ಹರಿಶ್ಚಂದ್ರದ ವಶಿಷ್ಟ, ತ್ರಿಶಂಕು, ಸಮಗ್ರ ಭೀಷ್ಮದ ದೇವವ್ರತ ಮುಂತಾದ ಪಾತ್ರಗಳು ಅಪಾರ ಜನ ಮನ್ನಣೆ ಗಳಿಸಿದವು. ನಂತರ ಬಡಗಿನ ಸಾಲಿಗ್ರಾಮ ಮೇಳ ಸೇರಿದ ಇವರು ಬಳಿಕ ಆಗಷ್ಟೇ ಹೊಸದಾಗಿ ಪ್ರಾರಂಭವಾದ ಪೆರ್ಡೂರು ಮೇಳ ಸೇರಿದರು ಅಲ್ಲಿ ಜಯಬೇರಿ ಬಾರಿಸಿದ ಶೂದ್ರ ತಪಸ್ವಿನಿ, ಚಾರುಚಂದ್ರಿಕೆ ಮುಂತಾದ ಪ್ರಸಂಗಗಳ ಅವರ ಪಾತ್ರ ಅಪಾರ ಜನ ಮನ್ನಣೆ ಗಳಿಸಿತು. ಸುಬ್ರಹ್ಮಣ್ಯ ದಾರೇಶ್ವರ ಮತ್ತು ದುರ್ಗಪ್ಪ ಗುಡಿಗಾರರ ಹಿಮ್ಮೇಳವೂ ಇದಕ್ಕೆ ಪೂರಕವಾಯಿತು. ನಿವೃತ್ತಿಯ ನಂತರ ಬಹುಕಾಲ ಅತಿಥಿ ಕಲಾವಿದರಾಗಿ ದುಡಿದ ಇವರ ನೂರಾರು ದ್ವನಿ ಸುರುಳಿಗಳು ದಾಖಲೆಯ ಮಾರಾಟ ಕಂಡಿದೆ. ಇಡಗುಂಜಿ ಮೇಳದಲ್ಲಿ ಜಯಬೇರಿ ಬಾರಿಸಿದ ರಾಮನಿರ್ಯಾಣದ ಇವರ ಲಕ್ಷ್ಮಣ ಶಂಭು ಹೆಗಡೆಯವರ ರಾಮ, ಮಹಾಬಲ ಹೆಗಡೆಯವರ ಕಾಲಪುರುಷ ಪಾತ್ರಗಳು ನೆಬ್ಬೂರು ನಾರಾಯಣ ಹೆಗಡೆಯವರ ಬಾಗವತಿಕೆಯಲ್ಲಿ ಸಹಸ್ರ ಸಹಸ್ರ ಪ್ರೇಕ್ಷಕರನ್ನು ರಂಜಿಸಿತ್ತು, “ ಕರುಣದಿ ಲಕ್ಷ್ಮಣ ನಮಿಸಿ ಕೈಮುಗಿದು” ಎಂಬ ಖಮಾಚ್ ರಾಗದ ನೆಬ್ಬೂರರ ಪದ್ಯಕ್ಕೆ ಗೋಡೆಯವರ ಬಾವಪೂರ್ಣ ಲಕ್ಷ್ಮಣನ ಪಾತ್ರ ಒಂದು ಕಾಲದಲ್ಲಿ ಅಪಾರ ಜನಮನ್ನಣೆ ಪಡೆದಿತ್ತು
73ರ ಹರೆಯದ ಗೋಡೆಯವರು ಸದಾ ಹಸನ್ಮುಖಿಯಾಗಿರುವ ಪ್ರತಿಬಾನ್ವಿತ ಕಲಾವಿದರು. ಕಲಾವಿದ ಹಿರಿಯನಾಗಿರಲಿ, ಕಿರಿಯನಾಗಿರಲಿ ಆತನ ಬಗ್ಗೆ ನೇರ ಪ್ರಶಂಶೆಯ ಮಾತನ್ನಾಡಿ ಪ್ರೋತ್ಸಾಹಿಸುವ ಇವರ ಹಿರಿತನಕ್ಕೆ ಯಾರೂ ತಲೆಬಾಗಲೇ ಬೇಕು. ತಮ್ಮ ಮಗನನ್ನು ಭಾಗವತನನ್ನಾಗಿ ಮಾಡಿ ಈ ರಂಗಕ್ಕೆ ನೀಡಿರುವುದು ಕಲೆಯ ಮೇಲಿರುವ ಅವರ ಪ್ರೀತಿಗೆ ಸಾಕ್ಷಿ.
ಪ್ರಶಸ್ತಿ , ಪುರಸ್ಕಾರಗಳು
2012ದಲ್ಲಿ ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ
1999ರಲ್ಲಿ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
ಉಡುಪಿಯ ರಾಮ-ವಿಠ್ಠಲ ಪ್ರಶಸ್ತಿ
ಉಡುಪಿ ಕಲಾರಂಗ ಪ್ರಶಸ್ತಿ
ಸ್ವರ್ಣವಲ್ಲೆ ಶ್ರೀಗಳು ``ಯಕ್ಷಕಲಾ ರತ್ನ`` ಬಿರುದು
ಬಹರೇನ್ನ ಕನ್ನಡ ಸಂಘ ಅವರನ್ನು ಸನ್ಮಾನ
ಅಖಿಲ ಹವ್ಯಕ ಮಹಾಸಭಾ ಸನ್ಮಾನ
ಗೋಡೆ ಚಿತ್ತಾರ, ಗೋಡೆ ಗಾರುಡಿ, ಮುಂತಾದ ಅಭಿನಂದನ ಗ್ರಂಥಗಳು ಪ್ರಕಟವಾಗಿವೆ.
ಹಲವು ಆಡಿಯೋ-ವಿಡಿಯೋ ಧ್ವನಿಮುದ್ರಣಗಳು ಆಗಿವೆ.
ಆಕಾಶವಾಣಿ, ದೂರದರ್ಶನಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ.
|
ಬಡಗು ತಿಟ್ಟಿನ ದಿಗ್ಗಜರು. ನಳದಮಯ೦ತಿಯ ಬಾಹುಕನ ಪಾತ್ರದಲ್ಲಿ ಚಿಟ್ಟಾಣಿ ರಾಮಚ೦ದ್ರ ಹೆಗಡೆ ಹಾಗೂ ಋತುಪರ್ಣನಾಗಿ ಗೋಡೆ ನಾರಾಯಣ ಹೆಗಡೆ
|
|
ಗದಾಯುದ್ದ ಪ್ರಸಂಗದ ಕೌರವ ಪಾತ್ರದಲ್ಲಿ ಗೋಡೆ ನಾರಾಯಣ ಹೆಗಡೆ
|
|
ಸಮಾರ೦ಭವೊ೦ದರಲ್ಲಿ ಸನ್ಮಾನಿಸಲ್ಪಡುತ್ತಿರುವ ಗೋಡೆ ನಾರಾಯಣ ಹೆಗಡೆ
|
|
|
|