ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಮಾತು ನಿಲ್ಲಿಸಿ ಮಂಚಕ್ಕೊರಗಿದ ಯಕ್ಷರಂಗದ ಜ್ವಾಲೆ ಅರಾಟೆ ಮಂಜುನಾಥ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಮ೦ಗಳವಾರ, ಜೂನ್ 24 , 2014

ಬಡಗುತಿಟ್ಟು ಯಕ್ಷಗಾನದ ಸ್ತ್ರೀವೇಷಧಾರಿಗಳಲ್ಲಿ ಅಗ್ರ ಪಂಕ್ತಿಯ ಹೆಸರು ಅರಾಟೆ ಮಂಜುನಾಥನವರದ್ದು. ಯಕ್ಷಗಾನದ ಇತಿಹಾಸದಲ್ಲಿ ಕಲಾವಿದನೊಬ್ಬ ಅದರಲ್ಲೂ ಸ್ತ್ರೀಪಾತ್ರಧಾರಿಯೊಬ್ಬರು ಬಹು ಪ್ರಸಿಧ್ಧಿ ಪಡೆದು ಸಮಾಜದಲ್ಲಿ ಕಲಾವಿದರ ಗಡಣದಲ್ಲಿ ರಾಜಕೀಯ ರಂಗದಲ್ಲೂ ವಿಶಿಷ್ಟ ವ್ಯಕ್ತಿತ್ವದಿಂದ ಮೇರುಪಂಕ್ತಿಯಲ್ಲಿ ಗುರುತಿಸಿಕೊಂಡಿದ್ದು ಅಪರೂಪದ ಸಾಧನೆ. ಯಕ್ಷಲೋಕದ ಮಾಯಾಂಗನೆ, ಮಿನುಗುತಾರೆ ಎಂದು ಅಭಿಮಾನಿಗಳಿಂದ ಕರೆಸಿಕೊಂಡ ಇವರು ಪುಂಡು ವೇಷಧಾರಿಯಾಗಿ, ಸ್ತ್ರೀವೇಷಧಾರಿಯಾಗಿ, ಮೇಳದ ಸಂಚಾಲಕನಾಗಿ, ಶ್ರೇಷ್ಟ ಸಂಘಟಕನಾಗಿ, ರಾಜ್ಯಾದ್ಯಂತ ದೂರದ ಬೆಂಗಳೂರು ಮುಂಬೈಗಳಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹುಟ್ಟುಹಾಕಿದವರು. ಕರ್ನಾಟಕ ರಾಜ್ಯ ಪ್ರಶಸ್ತಿ, ಶಿರಿಯಾರ ಮಂಜುನಾಯ್ಕ್ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ. ಉಡುಪಿ ಯಕ್ಷಗಾನ ಕಲಾಕ್ಷೇತ್ರದ ಪ್ರಶಸ್ತಿ, ಜಾನಪದ ಯಕ್ಷಗಾನ ಅಕಾಡೆಮಿ ಸದಸ್ಯತ್ವ ಸಹಿತ ಯಕ್ಷಗಾನ ಕಲಾವಿದರಲ್ಲೇ ಅತೀ ಹೆಚ್ಚು ಸನ್ಮಾನ ಪಡೆದವರಲ್ಲಿ ಒಬ್ಬರಾಗಿದ್ದಾರೆ.

ಶ್ರೀ ಸಾಲಿಗ್ರಾಮ ಮೇಳದಲ್ಲಿ ಜಯಬೇರಿ ಪಡೆದ ಜ್ವಾಲಾ ಪ್ರಸಂಗದ ಅವರು ಅಭಿನಯಿಸಿದ ಛಲದಂಕ ಹೆಣ್ಣು ಜ್ವಾಲೆಯಂತೆ ನಿಜಜೀವನದಲ್ಲೂ ಬದುಕಿದ ಇಂತಹ ಮಹಾನ್ ಕಲಾವಿದ ಕಳೆದ ಐದು ವರ್ಷದಿಂದ ಪಾರ್ಶ್ವ ವಾಯು ಪೀಡಿತರಾಗಿ ಮಾತನಾಡಲಾಗದೇ ನಡೆಯಲಾರದೇ ಮಂಚದಲ್ಲಿ ಒರಗಿ ಚಡಪಡಿಸುತಿದ್ದಾರೆ. ಇನ್ನೊಬ್ಬರ ಸಹಾಯವಿಲ್ಲದೇ ತನ್ನ ದೈನಂದಿನ ಕಾರ್ಯಗಳನ್ನು ಮಾಡಲಾಗದೆ ಆಕಾಶ ನೋಡುತ್ತಾ ಮೂಕ ರೋದನ ಮಾಡುತ್ತಿರುವ ಇವರಿಗೆ ಕಲಾಭಿಮಾನಿಗಳ ಸಾಂತ್ವನ ತುರ್ತಾಗಿ ಬೇಕಾಗಿದೆ. ಯಕ್ಷಗಾನ ಕಾರ್ಯಕ್ರಮವೊಂದರಲ್ಲಿ ಅವರ ನೆಚ್ಚಿನ ಪಾತ್ರವಾದ ಬೀಷ್ಮವಿಜಯದ ಅ೦ಬೆಯ ಪಾತ್ರದಲ್ಲಿ ಅಭಿನಯಿಸುತ್ತಿರುವಾಗಲೇ ಅಧಿಕ ರಕ್ತದೊತ್ತಡದಿಂದ ರಂಗದಲ್ಲಿ ಕುಸಿದವರು ಮತ್ತೆ ಮೇಲೇಳಲಿಲ್ಲ. ದೇಹದ ಒಂದು ಭಾಗ ಚೈತನ್ಯ ಕಳೆದುಕೊಂಡ ಅವರು ಮತ್ತೆ ಚೇತರಿಸಿಕೊಳ್ಳಲಿಲ್ಲ. ಮೇರು ಕಲಾವಿದರಾದ ಕೋಟ ವೈಕುಂಠ ಮತ್ತು ಕುಂಜಾಲು ರಾಮಕೃಷ್ಣರಂತೆ ಜೀವಿತದ ಸ೦ಧ್ಯಾಕಾಲದಲ್ಲಿ ಜೀವನ್ಮರಣ ಹೋರಾಟ ನಡೆಸುತಿದ್ದಾರೆ.

ಅಪ್ರತಿಮ ಸ್ತ್ರೀವೇಷಧಾರಿ

ತೆಂಕು ಬಡಗು ತಿಟ್ಟಿನ ಖ್ಯಾತ ಸ್ತ್ರೀವೇಷಧಾರಿಗಳಲ್ಲಿ ಒಬ್ಬರಾಗಿ ಸ್ತ್ರೀಪಾತ್ರಕ್ಕೆ ಹೇಳಿಮಾಡಿಸಿದ ರೂಪ ಆಳಂಗ ಸ್ವರ, ಒನಪು, ವೈಯ್ಯಾರ ಅಂಗ ಸೌಷ್ಟವ, ತೂಕದ ಮಾತು, ರಂಗಾನುಭವ, ಪ್ರಸಂಗಾನುಭವಗಳಿಂದ ಬಹುಬೇಗ ಜನಪ್ರಿಯತೆ ಪಡೆದ ಅರಾಟೆಯವರು ಚಿಕ್ಕ ಪ್ರಾಯದಲ್ಲೇ ಸ್ತ್ರೀವೇಶದಾರಿಯಾಗಿ ಗುರುತಿಸಿಕೊಂಡರು. ಬಾಲಕಲಾವಿದನಾಗಿ ಮಂದಾರ್ತಿ ಮೇಳದಲ್ಲಿ ರೇಣುಕಾ ಮಹಾತ್ಮೆಯ ಪರಶುರಾಮನಾಗಿ ಜನಪ್ರಿಯತೆ ಗಳಿಸಿಕೊಂಡ ಅವರು ಸ್ತ್ರೀಯ ಕೋಮಲತೆ ಮಾತಿನ ಮಾಧುರ್ಯ ಭಾವದಲ್ಲಿ ಲಜ್ಜೆ ತೋರ್ಪಡಿಸುತ್ತಾ ಗಂಡೇ ಹೆಣ್ಣಾಗಿ ರಂಗಸ್ಥಳ ರಾಣಿಯಾಗಿ ಗುರುತಿಸಿಕೊಂಡರು. ಸೌಮ್ಯ ಪಾತ್ರಗಳಾದ ದಮಯಂತಿ, ಸೀತೆ, ಚಿತ್ರಾಂಗದೆ, ಸಾವಿತ್ರಿ, ತಾರೆ, ಮಂಡೋದರಿ ಸೈರೇಂದ್ರಿ ಪಾತ್ರಗಳನ್ನು ಮನ ಮಿಡಿಯುವಂತೆ ಅಭಿನಯಿಸಬಲ್ಲ ಇವರ ಶಶಿಪ್ರಭೆ, ಅಂಬೆ, ಜ್ವಾಲೆ, ಕೈಕೆಯಂತ ದಿಟ್ಟ ಪಾತ್ರಗಳೂ ಸಹ ಅಷ್ಟೇ ಪರಿಪೂರ್ಣ. ಅವರಿಗೆ ಬಹು ಪ್ರಸಿಧ್ಧಿ ತಂದುಕೊಟ್ಟ ಪಾತ್ರಗಳು ಬಡಗುತಿಟ್ಟಿನಲ್ಲಿ ಕಸೆ ವೇಷದಿಂದ ಗುರುತಿಸಲ್ಪಡುವ ಪ್ರತಾಪದ ದ್ರೌಪದಿ, ಮೀನಾಕ್ಷಿ, ಪದ್ಮಗ೦ಧಿ, ಪ್ರಮೀಳೆ ಮುಂತಾದ ಕಸೆ ವೇಷಗಳು.

ಬಾಲ್ಯ, ದಿಗ್ಗಜರ ಒಡನಾಟ

ಕುಂದಾಪುರ ತಾಲೂಕಿನ ಗುಲ್ವಾಡಿ ಸಮೀಪದ ಕರ್ಕಿ ರಾಮ ನಾಯ್ಕ ಮತ್ತು ಮಂಜಮ್ಮ ದಂಪತಿಯ ಜೇಷ್ಟ ಪುತ್ರನಾಗಿ 1942ರಲ್ಲಿ ಜನಿಸಿದ ಅರಾಟೆಯವರು ನಾಲ್ಕನೇ ತರಗತಿವರೆಗೆ ಅಭ್ಯಾಸಮಾಡಿ ಮಾರಣಕಟ್ಟೆ ಮೇಳದಲ್ಲಿ ಕೋಡಂಗಿಯಾಗಿ ಗೆಜ್ಜೆ ಕಟ್ಟಿದರು. ತಾನು ಓದಲಿಲ್ಲ ಎಂಬ ನೋವಿನಲ್ಲಿ ವಿದ್ಯಾವಂತರ ಬಗ್ಗೆ ಅತೀವ ಗೌರವ ಹೊಂದಿದ ಅವರ ಬಹುಕಾಲದ ಸ್ನೇಹಿತರೂ ಕೂಡ ಸಮಾಜದ ವಿದ್ಯಾವಂತ ಸಜ್ಜನರು. ತಮ್ಮ ಮೂವರು ಮಕ್ಕಳಿಗೆ ಉನ್ನತ ಮಟ್ಟದ ವಿದ್ಯೆ ನೀಡಿ ಕಲಾವಿದರಿಗೆ ಆದರ್ಶಪ್ರಾಯರಾಗಿದ್ದಾರೆ. ಬಾಲ ಗೋಪಾಲ, ಪೀಠಿಕಾ ಸ್ತ್ರೀವೇಷ, ಹೀಗೆ ಹಂತ ಹಂತವಾಗಿ ಮೇಲೇರಿದ ಇವರು ಮಟಪಾಡಿ ಶ್ರೀನಿವಾಸ ನಾಯ್ಕರಲ್ಲಿ ಶಿಷ್ಯರಾಗಿ ಸೇರಿಕೊಂಡು ಹೆಜ್ಜೆಗಾರಿಕೆ ಕಲಿತರು.

ಬಡಗುತಿಟ್ಟಿನಲ್ಲಿ ಆ ಕಾಲದಲ್ಲಿ ಪ್ರಬಲ ಸ್ಪರ್ಧಿಗಳಾಗಿ ಗುರುತಿಸಿಕೊಂಡ ಅರಾಟೆ ಮತ್ತು ವೈಕುಂಠ ಇವರಿಬ್ಬರು ಒಬ್ಬರಿಗೊಬ್ಬರು ಸರಿಮಿಗಿಲೆಣಿಸಿಕೊಂಡಿದ್ದರು. ಅರಾಟೆಯವರು ಪ್ರಬಲ ನೃತ್ಯಗಾರರೆಂದು ಗುರುತಿಸಿಕೊಳ್ಳಲಾಗದಿದ್ದರೂ ತನ್ನ ವೀರೋಚಿತ ಅಭಿನಯ, ವೇಗದ ಕುಣಿತದಿಂದ ಮದನಾಕ್ಷಿ, ಮೀನಾಕ್ಷಿ, ದ್ರೌಪದಿ ಮುಂತಾದ ವೇಷಗಳಲ್ಲಿ ಇನ್ನಿಲ್ಲದ ಯಶಸ್ಸು ಗಳಿಸಿದರು.

ಅರಾಟೆ ಮಂಜುನಾಥ
ಜನನ : 1942
ಜನನ ಸ್ಥಳ : ಗುಲ್ವಾಡಿ, ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಅಪ್ರತಿಮ ಸ್ತ್ರೀವೇಷಧಾರಿಯಾಗಿ 40 ವರ್ಷಗಳ ಕಾಲ ಸಾಲಿಗ್ರಾಮ, ಮಾರಣಕಟ್ಟೆ, ಕೊಲ್ಲೂರು, ಮಂದಾರ್ತಿ, ಇಡಗುಂಜಿ, ಕುಂಡಾವು, ಸುರತ್ಕಲ್, ಮೂಲ್ಕಿ ಮೇಳಗಳಲ್ಲಿ ಕಲಾಸೇವೆ.
ಪ್ರಶಸ್ತಿಗಳು:
  • ಕರ್ನಾಟಕ ರಾಜ್ಯ ಪ್ರಶಸ್ತಿ
  • ಶಿರಿಯಾರ ಮಂಜುನಾಯ್ಕ್ ಪ್ರಶಸ್ತಿ
  • ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ
  • ಉಡುಪಿ ಯಕ್ಷಗಾನ ಕಲಾಕ್ಷೇತ್ರದ ಪ್ರಶಸ್ತಿ
  • ಜಾನಪದ ಯಕ್ಷಗಾನ ಅಕಾಡೆಮಿ ಸದಸ್ಯತ್ವ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
ಮರಣ ದಿನಾ೦ಕ : ಜನವರಿ 30, 2015

ದಿ. ಹಾರಾಡಿ ನಾರಾಯಣ ಗಾಣಿಗ, ಕೊಕ್ಕರ್ಣೆ ನರಸಿಂಹ ಕಾಮತ್, ಕೊಳ್ಕೆಬೈಲು ಶೀನ ನಾಯ್ಕ್, ಮಾರ್ಗೋಳಿ ಗೋವಿಂದ ಸೇರೆಗಾರ್, ನೀಲಾವರ ಸುಬ್ಬಣ್ಣ ಶೆಟ್ಟಿ, ಹೆರಂಜಾಲು ವೆಂಕಟರಮಣ, ವಂಡ್ಸೆ ನಾರಾಯಣ ಗಾಣಿಗರಂತ ಸ್ತ್ರೀವೇಷಧಾರಿಗಳು ವಯೋ ಸಹಜದಿಂದ ನೇಪತ್ಯಕ್ಕೆ ಸರಿದಾಗ ಬಡಗುತಿಟ್ಟು ರಂಗಸ್ಥಳಕ್ಕೆ ಸ್ತ್ರೀವೇಷದಲ್ಲಿ ಆಶಾಕಿರಣವಾದವರು ಕೋಟ ವೈಕುಂಠ ಮತ್ತು ಅರಾಟೆ ಮಂಜುನಾಥ ಎಂಬ ಹೆಗ್ಗಳಿಕೆಗೆ ಪಾತ್ರವಾದವರಿವರು.

ಮಾರಣಕಟ್ಟೆ ಮೇಳದಲ್ಲಿ ಗುರು ವೀರಭದ್ರ ನಾಯಕರ ಒಡನಾಟದಲ್ಲಿ ಪರಿಪೂರ್ಣ ಸ್ತ್ರೀವೇಶದಾರಿಯಾಗಿ ಮೂಡಿಬಂದ ಇವರ ಶ್ವೇತ ಕುಮಾರ ಚರಿತ್ರೆಯ ತ್ರಿಲೋಕ ಸುಂದರಿ, ಮೊಳಹಳ್ಳಿ ಹೆರಿಯನವರ ಶ್ವೇತಕುಮಾರ, ಉಡುಪಿ ಬಸವನವರ ಯಮ, ವಂಡ್ಸೆ ನಾರಾಯಣ ಗಾಣಿಗರ ಶಿವೆ ಬಹು ಖ್ಯಾತಿ ಗಳಿಸಿತ್ತು. ಬಳಿಕ ಮರವಂತೆ ನರಸಿಂಹ ದಾಸರೊಂದಿಗೆ ತೆಂಕಿನ ರಾಜ ರಾಜೇಶ್ವರಿ ಮೇಳದಲ್ಲಿ ಸೇವೆ ಸಲ್ಲಿಸಿದರು. ಬಳಿಕ ಕೊಲ್ಲೂರು, ಮಂದಾರ್ತಿ, ಇಡಗುಂಜಿ, ಕುಂಡಾವು, ಸುರತ್ಕಲ್, ಮೂಲ್ಕಿ ಮೇಳಗಳಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದರು.

ಸಾಲಿಗ್ರಾಮ ಮೇಳದಲ್ಲಿ ಸುಧೀರ್ಘ ಸೇವೆ

ಸಾಲಿಗ್ರಾಮ ಮೇಳ ಮತ್ತು ಅರಾಟೆಯವರಿಗೂ ಅವಿನಾಭಾವ ಸ೦ಬ೦ಧ. ಅವರ ದೀರ್ಘಕಾಲದ ಸೇವೆ ಶ್ರೀ ಸಾಲಿಗ್ರಾಮ ಮೇಳದಲ್ಲಿ. ಅಂದಿನ ಯಜಮಾನರಾದ ಪಳ್ಳಿ ಸೋಮನಾಥ ಹೆಗ್ಡೆಯವರ ನೆಚ್ಚಿನ ಕಲಾವಿದರಾದ ಅವರು ಮೇಳ ದೂರದ ಮುಂಬೈಗೆ ಮಳೆಗಾಲ ಪ್ರಯಾಣ ಬಳಸುವಲ್ಲಿ ಮುಂಚೂಣಿಯಲ್ಲಿದ್ದು ಅಲ್ಲಿನ ಸಂಚಾಲಕತ್ವವನ್ನೂ ವಹಿಸಿಕೊಂಡಿದ್ದರು. ಅರಾಟೆಯವರು ಹೊಸ ಪ್ರಸಂಗದಲ್ಲಿ ಕಾಣಿಸಿಕೊಂಡಿದ್ದು ಪ್ರಥಮವಾಗಿ ಸಾಲಿಗ್ರಾಮ ಮೇಳದಲ್ಲಿ. ನೆಲ್ಲೂರು ಮರಿಯಪ್ಪಾಚಾರ್, ಕಾಳಿಂಗ ನಾವಡರಂತ ಮೇರು ಕಲಾವಿದರಿದ್ದ ಅಂದಿನ ಸಾಲಿಗ್ರಾಮ ಮೇಳದಲ್ಲಿ ರಾಜ ನರ್ತಕಿ, ಚೈತ್ರ ಪಲ್ಲವಿ, ಮಹಾಸತಿ ಮಂಗಳಾ, ಶ್ರೀ ದೇವಿ ಬನಶಂಕರಿ, ರತಿರೇಖಾ ಚಲುವೆ ಚಿತ್ರಾವತಿ, ಕಾಂಚನ ಶ್ರೀ, ಧರ್ಮಸಂಕ್ರಾಂತಿ ಪ್ರಸಂಗದ ಸ್ತ್ರೀ ಪಾತ್ರಗಳು ನಿತ್ಯನೂತನ.

ಕಾಳಿಂಗ ನಾವುಡ ವಿರಚಿತ ಸಾವಿರಾರು ಪ್ರಯೋಗ ಕಂಡು ಹೊಸಪ್ರಸಂಗದಲ್ಲಿ ದಾಖಲೆ ನಿರ್ಮಿಸಿದ ನಾಗಶ್ರೀ ಪ್ರಸಂಗ ಅವರ ಗಯ್ಯಾಳಿ ಪ್ರಭಾ೦ಗಿಯ ಪಾತ್ರ ಅವರಿಗೆ ಅಪಾರ ಜನಮನ್ನಣೆ ಗಳಿಸಿಕೊಟ್ಟದ್ದು ಮಾತ್ರವಲ್ಲ ಆ ನಂತರ ಆ ಪಾತ್ರವನ್ನು ಅವರಷ್ಟು ತಾದ್ಯಾತ್ಮಕತೆಯಿಂದ ಅಭಿನಯಿಸುವ ಪಾತ್ರಧಾರಿಯೇ ಬರಲಿಲ್ಲವೆನ್ನಬಹುದು. ಪ್ರಭಾ೦ಗಿಯ ಪಾತ್ರವನ್ನು ಅಂದಿನ ಪ್ರಧಾನ ಕಲಾವಿದ ಜಲವಳ್ಳಿ ವೆಂಕಟೇಶ ರಾಯರೊಂದಿಗೆ ಅವರು ಚಿತ್ರಿಸಿದ ಪರಿ ಕಲಾರಸಿಕರ ಮನದಲ್ಲಿ ಅಚ್ಚೊತ್ತಿದೆ. ಯಕ್ಷರಂಗದ ಶ್ರೀಕೃಷ್ಣ ಶಿರಿಯಾರ ಮಂಜುನಾಯ್ಕರೊಂದಿಗೆ ಅವೆರು ಅಭಿನಯಿಸಿದ ಲೀಲಾಮೂರ್ತಿ ಶೀಕೃಷ್ಣ, ಜ್ವಾಲಾ ಮುಂತಾದ ಪೌರಾಣಿಕ ಪ್ರಸಂಗದ ಪಾತ್ರಗಳು ಸಹ ಅಷ್ಟೇ ಪರಿಪೂರ್ಣವಾದವುಗಳು.

ಬಡಗುತಿಟ್ಟಿನ ವಿವಿದ ಮೇಳಗಳಲ್ಲಿ ಮೇರುಕಲಾವಿದರಾದ ಐರೋಡಿ ಗೋವಿಂದಪ್ಪನವರ ಪ್ರತಾಪದ ಭೀಮನಿಗೆ ದ್ರೌಪದಿ. ಚಿಟ್ಟಾಣಿಯವರ ಕೀಚಕನಿಗೆ ಸೈರೇಂದ್ರಿ, ಜಲವಳ್ಳಿಯವರ ಅರಗಿನಾಲಯದ ಭೀಮನಿಗೆ ಮಾಯಾ ಹಿಡಿಂಬೆ, ಕುಮ್ಟಾ ಗೋವಿಂದ ನಾಯ್ಕರ ಹನುಮಂತನಿಗೆ ಸೀತೆ, ನಗರ ಜಗನ್ನಾಥ ಶೆಟ್ಟಿಯವರ ಭೀಷ್ಮನಿಗೆ ಅಂಬೆ, ಆರ್ಗೋಡು ಮೋಹನದಾಸ ಶೆಣೈಯವರ ರಾಮನಿಗೆ ಸೀತೆ, ಶಿರಿಯಾರ ಮಂಜು ನಾಯ್ಕರ ಕೃಷ್ಣನಿಗೆ ಸತ್ಯಭಾಮೆ, ಬಳ್ಕೂರು ಕೃಷ್ಣಯಾಜಿ ಹಾಗೂ ತೀರ್ಥಳ್ಳಿ ಗೋಪಾಲಾಚಾರ್ಯರ ಅಭಿಮನ್ಯುವಿಗೆ ಸುಭದ್ರೆ, ಕೋಟ ವಕುಂಠರ ದೇವಯಾನಿಗೆ ಶರ್ಮಿಷ್ಟೆ, ಹೀಗೆ ಹಿರಿಯ ಕಿರಿಯ ಕಲಾವಿದರೊಂದಿಗಿನ ಅವರ ಜೋಡಿ ವೇಷ ಅಪೂರ್ವವಾದದ್ದು.

ಪತ್ನಿ ಜಲಜಾಕ್ಷಿ ಮತ್ತು ಮೂವರು ಮಕ್ಕಳೊಂದಿಗೆ ಬಾಳಸಂಜೆಯಲ್ಲಿ ಸುಖ ಜೀವನ ನಡೆಸುತಿದ್ದ ಈ ಅಪೂರ್ವ ಕಲಾವಿದ ಇಂದು ಗುಣ ಪಡಿಸಲಾಗದ ಅನಾರೋಗ್ಯದಿಂದ ಚಡಪಡಿಸುತ್ತಿರುವುದು ಕಲಾಭಿಮಾನಿಗಳಿಗೆ ನೋವಿನ ಸ೦ಗತಿ. ಅವರು ಅತೀ ಶೀಘ್ರವಾಗಿ ಗುಣಮುಖರಾಗಿ ಮತ್ತೆ ರಂಗವೇರಲಿ. ಯಕ್ಷಗಾನದ ಮಹಾರಾಣಿ ಮತ್ತೆ ಯಕ್ಷಸಿಂಹಾಸನವೇರಲಿ ಎಂಬುದೇ ಕಲಾಭಿಮಾನಿಗಳ ಹಾರೈಕೆ.

****************

ಅರಾಟೆ ಮಂಜುನಾಥರವರ ಕೆಲವು ಭಾವಚಿತ್ರಗಳು

( ಚಿತ್ರ ಕೃಪೆ : ಅಶ್ವಿನಿ.ಎನ್.ಹಕ್ಲಾಡಿ & ಅ೦ತರ್ಜಾಲದ ಅನಾಮಿಕ ಮಿತ್ರರು )




ಮಾಜಿ ಪ್ರಧಾನಮ೦ತ್ರಿ ಅಟಲ್ ಬಿಹಾರಿ ವಾಜಪೇಯಿಯರೊ೦ದಿಗೆ



ಇತ್ತೀಚಿನ ಪ್ರಶಸ್ತಿ ಪ್ರದಾನ ಸಮಾರ೦ಭವೊ೦ದರಲ್ಲಿ















Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ