ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕಂಚಿನ ಕಂಠದ ಭಾಗವತ ಶಿರೋಮಣಿ ಮರವಂತೆ ನರಸಿಂಹದಾಸರು

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಆಗಸ್ಟ್ 8 , 2014

ಬಡಗು ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಾಗಿ ಸುಮಾರು ಅರವತ್ತು, ಎಪ್ಪತ್ತರ ದಶಕದಲ್ಲಿ ತಮ್ಮ ಕಂಚಿನ ಕಂಠದಿಂದ ಜನಮನ ರಂಜಿಸಿದವರು ಮರವಂತೆಯ ದಾಸ ಸಹೋದರರಾದ ನರಸಿಂಹದಾಸ ಮತ್ತು ಶೀನದಾಸರು. ಕರಾವಳಿ ಕರ್ನಾಟಕದಲ್ಲಿ “ದಾಸ ಶೈಲಿ” ಎಂಬ ಹೊಸ ಭಾಗವತಿಕೆಯ ಶೈಲಿಯನ್ನು ಹುಟ್ಟುಹಾಕಿದ ಇವರು ಅವರದ್ದೇ ಆದ ಅಭಿಮಾನಿಗಳನ್ನು ಆ ಕಾಲದಲ್ಲಿ ಹೊಂದಿದ್ದರು. ಎಂಬತ್ತರ ದಶಕದಲ್ಲೆ ರಾಜ್ಯ ಪ್ರಶಸ್ತಿಯಿಂದ ಪುರಸ್ಕೃತರಾದ ಇವರು ಕರಾವಳಿಯ ಜನಮಾನಸದಲ್ಲಿ ಇಂದಿಗೂ ನೆಲೆ ನಿಂತವರು.

ಭಾಗವತ ಕುಟು೦ಬದ ಕುಡಿ

ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಮರವಂತೆಯ ತೀರಾ ಬಡ ಕುಟುಂಬದ ದಾಸರ ಮನೆತನದಲ್ಲಿ ಹುಟ್ಟಿದ ನರಸಿಂಹದಾಸರಿಗೆ ಮರವಂತೆಯ ಕಡಲ ಕಿನಾರೆಯ ಸಮುದ್ರದ ಬೋರ್ಗೆರೆತ ಬಾಲ್ಯದಿಂದಲೂ ಕೇಳಿಬರುತ್ತಿದ್ದರಿಂದ ಅವರ ಸ್ವರವೂ ಅದಕ್ಕೆ ಹೊಂದಿಕೊಂಡಿರಬೇಕು. ಹಾಗಾಗಿ ಏರುಶ್ರುತಿಯ ಕಂಚಿನ ಕಂಠದ ಭಾಗವತರಾಗಿ ಬಹುಬೇಗ ಮೂಡಿಬಂದರು. ಇವರ ಸಹೋದರರಲ್ಲಿ ಶೀನದಾಸರು ಆ ಕಾಲದ ಖ್ಯಾತಿವೆತ್ತ ಭಾಗವತರಾಗಿದ್ದು ಇನ್ನೋರ್ವ ಸಹೋದರ ಶಿವರಾಯ ದಾಸರು ಸಹ ಗಮಕಿ.

ಕೇವಲ ಐದನೇ ತರಗತಿಯ ಶಿಕ್ಷಣ ಮುಗಿಸಿದ ದಾಸರು, ಬಾಲ್ಯದಿಂದಲೂ ದಾಸರ ಪದ್ಯಗಳನ್ನು, ಗಮಕಗಳನ್ನೂ ಸುಶ್ರಾವ್ಯವಾಗಿ ಹಾಡುತ್ತಿದ್ದರಿಂದ ಅವರಲ್ಲಿದ್ದ ಸಂಗೀತ ಪತಿಭೆ ಪ್ರಕಟವಾಗ ತೊಡಗಿತು. ತಾನು ಸುತ್ತಾಡಿದಲ್ಲೇಲ್ಲ ತನ್ನ ಅಭಿಮಾನಿ ಬಳಗದಿಂದ ಒತ್ತಾಯ ಪೂರ್ವಕವಾಗಿ ಹಾಡುವಂತೆ ಹೇಳಿಸಿ ಕೊಳ್ಳುತ್ತಿದ್ದರು. ಇವರಲ್ಲಿದ್ದ ಸೂಪ್ತ ಸಂಗೀತ ಗಾರನನ್ನು ಸೂಕ್ತವಾಗಿ ಪೋಷಿಸಿದ ಕೀರ್ತಿಗೆ ಅಂದಿನ ಕಾಲದ ಖ್ಯಾತ ಕಲಾವಿದ ಕಿಸ್ಮತಿ ರಾಮಕೃಷ್ಣ ಹೆಬ್ಬಾರರು ಕಾರಣರಾದರು. ತಾಳ, ರಾಗ, ಲಯಗಳನ್ನು ದಾಸರು ಕಿಸ್ಮತಿಯವರ ಶಿಷ್ಯರಾಗಿ ಗಳಿಸಿದರು.

ಭಾಗವತರಾಗಿ ಪಾದಾರ್ಪಣೆ

ಕೊಲ್ಲೂರು ಸಮೀಪ ನಿಟ್ಟೂರು ಮೇಳವೆಂಬ ಹವ್ಯಾಸಿ ಕೂಟದಲ್ಲಿ ಪ್ರಪ್ರಥಮವಾಗಿ ತಾಳ ಹಿಡಿದ ದಾಸರು ನಂತರ ಸಾಗರದ ಗಣಪತಿ ಮೇಳವೆಂಬ ಇನ್ನೊಂದು ಹವ್ಯಾಸಿ ತಂಡದಲ್ಲಿ ಭಾಗವತರಾಗಿ ಸೇರ್ಪಡೆಗೊಂಡರು. ತೀರ್ಥಹಳ್ಳಿ ಸಮೀಪದ ಮೇಗರವಳ್ಳಿ ಮೇಳದಲ್ಲಿ ತಿರುಗಾಟ ಮಾಡಿ ಮಲೆನಾಡ ಆಸುಪಾಸಿನಲ್ಲಿ ದಾಸರ ಇಂಪಾದ ಧ್ವನಿ ಮೊಳಗುವಂತೆ ಮಾಡಿದರು. ಮುಂದೆ ಅನಂತ ಪಧ್ಮನಾಭ ದಶಾವತಾರ ಮೇಳ ಪೆರ್ಡೂರಿನ ಅಧಿಕೃತ ಭಾಗವತರಾಗಿ ಸೇರ್ಪಡೆಗೊಂಡರು. ದಾಸರ ಕಂಠಶ್ರೀಗೆ ಮನಸೋತು ಅಲ್ಲಿ ಭಾಗವತರಗಿದ್ದ ಮಟ್ಟಿ ಶಂಕರನಾರಯಣ ಭಾಗವತರೇ ದಾಸರನ್ನು ಭಾಗವತರನ್ನಾಗಿ ಮಾಡಿ ತಾವು ಸಂಗೀತಗಾರರಾಗಿ ಉದಾರತೆಯನ್ನು ಮೆರೆದರು. ಮುಂದೆ ಮಾರಣಕಟ್ಟೆ ಮೇಳದಲ್ಲಿ ದೇವರ ಮುಂದೆ ತಾಳ ಹಿಡಿದು ಅಧೀಕೃತ ಭಾಗವತರಾಗಿ ತಮ್ಮ ಇಂಪಾದ ಹಾಡುಗಳಿಂದ ಯಕ್ಷರಂಗದಲ್ಲಿ ಮನೆಮಾತಾದರು.

ಘಟಾನುಘಟಿಗಳ ಸಮ್ಮಿಲನ

ಬೇಳಂಜೆ ತಿಮ್ಮಪ್ಪ ನಾಯ್ಕರ ಮದ್ದಳೆ, ಕೆಮ್ಮಣ್ಣು ಆನಂದರ ಚಂಡೆ, ದಾಸರ ಭಾಗವತಿಕೆ, ಈ ತ್ರಿಮೂರ್ತಿಗಳ ರಾಗ, ತಾಳ, ಲಯವು, ಯಕ್ಷಲೋಕದ ಕನಸಿನ ರಾಜ್ಯಕ್ಕೆ ರಸಿಕರನ್ನು ಒಯ್ಯುತಿದ್ದವು. ಅಂದಿನ ಅತಿರಥ ಮಹಾರೆಣಿಸಿದ ವೀರಭದ್ರ ನಾಯಕ್, ಪಾಂಡೇಶ್ವರ ವೆಂಕಟು, ಕೊಕ್ಕರ್ಣೆ ನರಸಿಂಹ ಕಾಮತ್, ಶ್ರೀನಿವಾಸ ನಾಯಕ್, ಅರಾಟೆ ಮಂಜುನಾಥ, ಉಡುಪಿ ಬಸವ, ಮುಂತಾದವರ ಗಡಣವೇ ಮೇಳೈಸಿ, ದಶಾವತಾರದಲ್ಲಿ ಸರಿಸಾಟಿಯಿಲ್ಲದ ಮೇಳವೆಂಬ ಕೀರ್ತಿಯೂ ಪಸರಿಸಿತ್ತು.

ಮರವಂತೆ ನರಸಿಂಹದಾಸರು
ಜನನ : 1920 ( ಸುಮಾರು)
ಜನನ ಸ್ಥಳ : ಮರವಂತೆ, ಕುಂದಾಪುರ
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
“ದಾಸ ಶೈಲಿ” ಎಂಬ ಹೊಸ ಭಾಗವತಿಕೆಯ ಶೈಲಿಯನ್ನು ಹುಟ್ಟುಹಾಕಿ, ತೆ೦ಕು ಹಾಗೂ ಬಡಗು ತಿಟ್ಟಿನಲ್ಲಿ, ಮೇಗರವಳ್ಳಿ, ಮಾರಣಕಟ್ಟೆ, ಇಡಗುಂಜಿ, ಅಮೃತೇಶ್ವರಿ, ಪೆರ್ಡೂರು, ಕೊಲ್ಲೂರು ಮೇಳಗಳಲ್ಲಿ 50 ವರ್ಷಗಳ ಕಾಲ ಮೇರು ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿಗಳು:
ಎಂಬತ್ತರ ದಶಕದಲ್ಲೆ ರಾಜ್ಯ ಪ್ರಶಸ್ತಿಯಿಂದ ಪುರಸ್ಕೃತರು

ಮರಣ ದಿನಾ೦ಕ : 2000
ಮೇಳದ ಖ್ಯಾತಿಗೆ ಮನಸೋತು ಕಾರ್ಕಳದ ಉದ್ಯಮೆಯೊಬ್ಬರು ಮೇಳವನ್ನು ಕರೆಸಿ ಆ ಕಾಲದಲ್ಲಿ ಹದಿನೆಂಟು ದಿನ ಮಹಾಭಾರತ ಪ್ರಸಂಗವನ್ನು ಆಡಿಸಿ, ದಾಸರ ನಾದಶ್ರೀಗೆ ಮರುಳಾಗಿ ಊರ ಗಣ್ಯರು ಮಾರಣಕಟ್ಟೆ ಮೇಳಕ್ಕೆ ಮಾನಪತ್ರ ನೀಡಿದ್ದು ಒಂದು ದಾಖಲೆಯಾಗಿದೆ. ಇಡಗುಂಜಿ ಮೇಳಕ್ಕೆ ಕೆರೆಮನೆ ಶಿವರಾಮ ಹೆಗಡೆಯವರು ದಾಸರನ್ನು ಅಧೀಕೃತ ಭಾಗವತರನ್ನಾಗಿ ಘೋಶಿಸಿದರು. ಬಳಿಕ ಕೊಲ್ಲೂರು ಮೇಳದಲ್ಲಿ ಸೇವೆಸಲ್ಲಿಸಿದ ದಾಸರನ್ನು ದಿ. ಕಲ್ಲಾಡಿ ಕೊರಗ ಶೆಟ್ಟರು ತಮ್ಮರಾಜರಾಜೇಶ್ವರಿ ಮೇಳಕ್ಕೂ, ಬಳಿಕ ಅವರ ಮಗ ವಿಠಲ ಶೆಟ್ಟರು ಕಟೀಲು ಮೇಳಕ್ಕೂ ಸೇರ್ಪಡೆಗೊಳಿಸಿದರು. ಹೀಗೆ ತೆಂಕಿನ ಜಾಗಟೆ ಹಿಡಿದು ಅಲ್ಲಿಯೂ ತಮ್ಮ ಕಂಠಶ್ರೀಯನ್ನು ಮೆರೆದರು.

ಹೊಸ ಶೈಲಿಯ ಪ್ರಸ೦ಗಗಳಿಗೂ ಸೈ

ದಾಸರು ತಮ್ಮ ಭಾಗವತಿಕೆಯ ಉತ್ತುಂಗದಲ್ಲಿ ಬಡಗಿನ ಪ್ರಸಿದ್ದ ಮೇಳವಾಗಿ ಮೆರೆಯತ್ತಿದ್ದ ಸಾಲಿಗ್ರಾಮ ಮೇಳ ಸೇರಿದರು. ಅದುವರೆಗೆ ಪೌರಾಣಿಕ ಪ್ರಸಂಗ ಪ್ರದರ್ಶಿಸುತಿದ್ದ ಸಾಲಿಗ್ರಾಮ ಮೇಳದಲ್ಲಿ “ವಸಂತ ಸೇನೆ” ಮತ್ತು “ಸತೀ ಸುಶೀಲೆ”ಮುಂತಾದ ಹೊಸ ಶೈಲಿಯ ಪ್ರಸಂಗಗಳನ್ನು, ಜನಪ್ರೀಯ ಗೊಳಿಸಿದರಲ್ಲದೆ ಅವು ಸತತ 150 ಪ್ರದರ್ಶನಗಳನ್ನುಕಿಕ್ಕಿರಿದ ಪ್ರೇಕ್ಷಕೃರಿಂದ ವೀಕ್ಷೀಸಲ್ಪಟ್ಟಿದ್ದು ದಾಸರ ಕಿರೀಟಕ್ಕೆ ಹೊಸ ತುರಾಯಿ ತಂದಿಟ್ಟಿತ್ತು. ಬಳಿಕ ಅಮೃತೇಶ್ವರಿ, ಕಮಲಶಿಲೆ ಮೇಳದಲ್ಲಿ ಸೇವೆಸಲ್ಲಿಸಿದ ದಾಸರ ಕಂಠ ವಿಶ್ರಾಂತಿ ಬಯಸಿತು. ವ್ರದ್ದಾಪ್ಯ, ಅನಾರೋಗ್ಯಗಳು ಬೆನ್ನು ಹತ್ತುತಿದ್ದಂತೆ ಐವತ್ತು ವರ್ಷಗಳ ದೀರ್ಘ್ಕಕಾಲ ಜನಮನವನ್ನು ಪುಲಕಗೊಳಿಸಿದ ದಾಸರ ಕಂಠಶ್ರೀ ಶಾಶ್ವತ ವಿಶ್ರಾಂತಿ ಪಡೆಯಿತು. ಕರಾವಳಿ ಯಕ್ಷಗಾನ ಕೋಗಿಲೆ 90ರ ದಶಕದ ಪೂರ್ವಾರ್ದದಲ್ಲಿ ಅಸ್ತಂಗತವಾಯಿತು.

ದಾಸ ಶೈಲಿಯ ಜನಕ

ದಾಸರ ಪದ್ಯಗಳು ಯಕ್ಷಗಾನ ವಿಮರ್ಶಕರ ಪರೀಕ್ಷೆಯಲ್ಲಿ ತೇರ್ಗಡೆಯಾದವುಗಳು. ಅವರ “ಹೇಳುವಣಿಗೆ” ಇನ್ನೋಬ್ಬರಿಂದ ಅನುಕರಿಸಲಸಾದ್ಯ. ದುರಂತವೆಂಬಂತೆ ಎಲ್ಲಾ ಭಾಗವತರನ್ನು ಅನುಕರಣೆಮಾಡಬಲ್ಲ ನಮ್ಮ ಯುವ ಭಾಗವತರಿಗೆ ದಾಸರ ಅನುಕರಣೆ ಸಾದ್ಯವಾಗಲೇ ಇಲ್ಲ. “ರುಕ್ಮಾಂಗದ ಚರಿತ್ರೆ’ ಪದ್ಯವೊಂದು ಸಾಕು ಅವರ ಸಾಮರ್ಥ್ಯವನ್ನು ಅಳೆಯಲು. ದಾಸರಂತ ಪ್ರತಿಭೆ ಬಹಳ ಅಪರೂಪ. ಅಂತಹ ಪ್ರತಿಭೆ ಇನ್ನೊಮ್ಮೆ ಹುಟ್ಟಿ ಬರುವೂದು ಬಲು ಅಪರೂಪ.



****************





Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
H Jnanadeva Mallya (9/12/2014)
ದಿ| ನರಸಿಂಹ ದಾಸರನ್ನು ಒಬ್ಬ ಪ್ರಸಿದ್ಧ ಭಾಗವತರನ್ನಾಗಿ ಗುರುತಿಸುವಂತೆ ಪ್ರಯತ್ನ ಪಟ್ಟವರಲ್ಲಿ ದಿವಂಗತರಾದ ನನ್ನ ತಂದೆ ಶ್ರೀ ಎಚ್.ಗಣಪತಿ ಮಲ್ಯರು, ಶ್ರೀ ಎಂ.ಎಂ.ಹೆಗ್ಡೆರು, ಹಾಗೂ ಶ್ರೀ ನೈಲಾಡಿ ಶಿವರಾಮ ಶೆಟ್ಟರು ತುಂಬಾ ಶ್ರಮ ವಹಿಸಿದ್ದಾರೆ. ನರಸಿಂಹದಾಸರು ಕುಂದಾಪುರಲ್ಲಿ ಯಾವಾಗಲು ನನ್ನ ತಂದೆ ಗಣಪತಿ ಮಲ್ಯರ ಅಂಗಡಿಗೆ ಬರುತ್ತಿದ್ದರು. ಅವರಿಗೆ ರಾಜ್ಯ ಪ್ರಶಸ್ತಿ ಸಿಗಬೇಕೆಂದು ತುಂಬಾ ಪ್ರಯತ್ನಪಟ್ಟಿದ್ದರು . ಎಲ್ಲಾ ಯಕ್ಷಗಾನ ಪ್ರಸಂಗ ಪುಸ್ತಕಗಳು ಭಾಗವತರಲ್ಲಿರಬೇಕೆಂದು ಅವರಿಗೆ ಸಂಗ್ರಹಿಸಿ ಕೊಟ್ಟಿದ್ದರು (ಆದರೆ ಭಾಗವತರು ಆರ್ಥಿಕ ತೊಂದರೆಯಿಂದ ಇದನ್ನು ಮಾರಿಕೊಂಡರು). ನರಸಿಂಹದಾಸರ ಶೈಲಿ ಹಿಂದಿನ ಕಡತವಾಗಿದ್ದು ಅವರೊಬ್ಬ ನಿಜವಾದ ಭಾಗವತರಾಗಿದ್ದರು. ಭಕಾರೊ ಭಗವತ ಭಕ್ತ ಗಕಾರೊ ಗರ್ವ ವರ್ಜಿತ ವಕಾರೊ ವಾಕ್ಪಾಟಿಚಾ ತಕಾರೊ ತತ್ವನಿರ್‍ಣಯ ಇದರಂತೆ ಇದ್ದರು.




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ