ಪರಂಪರಾಗತ ನೈಜತೆಯನ್ನು ಉಳಿಸಿ ಬೆಳೆಸಿದ ಕಲಾವಿದ ಜಂಬೂರು ರಾಮಚಂದ್ರ ಶಾನುಭಾಗ್
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಸೆಪ್ಟೆ೦ಬರ್ 13 , 2014
|
ಬಡಗುತಿಟ್ಟು ಯಕ್ಷಗಾನ ರಂಗದ ಸಂಪ್ರದಾಯಬದ್ಧ ಹಿರಿಯ ಕಲಾವಿದರಲ್ಲಿ ಅಚ್ಚಳಿಯದ ಹೆಸರು ಜಂಬೂರು ರಾಮಚಂದ್ರ ಶಾನುಭಾಗ್. ಪೌರಾಣಿಕ ಪ್ರಸಂಗಗಳಲ್ಲಿ ಸ್ವಂತಿಕೆ ಮೆರೆಸಿ ಹೆಜ್ಜೆ,ಗತ್ತು ಗಾಂಭೀರ್ಯ ಮಾತುಗಾರಿಕೆಗಳಲ್ಲಿ ಜನಮನ್ನಣೆ ಗಳಿಸಿದವರು. 74ರ ಹರೆಯದ ರಂಗಕಲಾವಿದ ತಮ್ಮ 16ನೇ ವಯಸ್ಸಿನಲ್ಲಿ ರಾಮಕೃಷ್ಣ ಹೆಬ್ಬಾರರ ಮಾರ್ಗದರ್ಶನದಲ್ಲಿ ಮ೦ದಾರ್ತಿ ಮೇಳದಲ್ಲಿ ಕಾಲಿಗೆ ಹೆಜ್ಜೆ ಕಟ್ಟಿದವರು. ಇವರ ಸೌಜನ್ಯಪೂರ್ಣ ವ್ಯಕ್ತಿತ್ವ, ಸತತ ಪರಿಶ್ರಮ, ಆಸಕ್ತಿಗೆ ಹಾರಾಡಿ, ಕೆರೆಮನೆ ದಿಗ್ಗಜರ ಒಡನಾಟದಲ್ಲಿ ವಿದ್ವತ್ಪೂರ್ಣ ಮಾರ್ಗದರ್ಶನ ಪಡೆದು ಎರಡನೆಯ ವೇಷಧಾರಿಯಾಗಿ ರಂಗದಲ್ಲಿ “ಜಂಬೂರು”ಎಂಬ ಖ್ಯಾತನಾಮರಾಗಿ ಬೆಳೆದವರು.
|
ಯಕ್ಷಗಾನ ತಿರುಗಾಟದ ಸುವರ್ಣೋತ್ಸವ
ಯಕ್ಷಗಾನ ತಿರುಗಾಟದ “ಸುವರ್ಣೋತ್ಸವ” ಕಂಡ ಬಹು ಅಪರೂಪದ ಮೇರು ವ್ಯಕ್ತಿತ್ವದ ಕಲಾವಿದ. ಮ೦ದಾರ್ತಿ, ಮಾರಣಕಟ್ಟೆ,ಕಮಲಶಿಲೆ, ಹಾಲಾಡಿ, ಅಮೃತೇಶ್ವರೀ, ಪೆರ್ಡೂರು, ಇಡಗುಂಜಿ,ಗುಂಡುಬಾಳ ಮೇಳಗಳಲ್ಲಿ ಕಲಾಸೇವೆಗೈದ ಹಿರಿಮೆ. ಹಳೆಯ ಪ್ರಸಂಗಗಳನ್ನು ಇಷ್ಟಪಡುವ ಶಾನುಭಾಗರು, ಯಕ್ಷಗಾನ ಉಳಿದದ್ದೇ ಪೌರಾಣಿಕ ಪ್ರಸಂಗಗಳಿಂದ ಎಂಬ ಖಚಿತ ಅಭಿಪ್ರಾಯ ಹೊಂದಿದವರು. ರಂಗದಲ್ಲಿ ಶ್ರೀಕೃಷ್ಣ,ಧರ್ಮರಾಯ,ಅರ್ಜುನ, ವಶಿಷ್ಟ, ರಾಮ, ಹನುಮಂತ ಪಾತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಒತ್ತಿ, ಯಕ್ಷ ರಸಿಕರ ಮನಸೂರೆಗೊಂಡು, ಪ್ರೀತ್ಯಾಧರಗಳಿಗೆ ಪಾತ್ರರಾದವರು. ಚೌಕಿಯಲ್ಲೂ ಕಿರಿಯ ಕಲಾವಿದರಿಗೆ ಸಾ೦ದರ್ಭಿಕವಾಗಿ ಕಥಾ ಸಂದರ್ಭ, ಅರ್ಥಗಾರಿಕೆ,ಹೇಳಿಕೊಟ್ಟು ಸಹಕಲಾವಿದರ ಗೌರವಕ್ಕೆ ಪಾತ್ರರಾದವರು. ಯಕ್ಷಗಾನದ ಪರಂಪರಾಗತ ನೈಜತೆಯನ್ನು ಉಳಿಸಿ ಬೆಳೆಸಿದವರಲ್ಲಿ ಜಂಬೂರರ ಕೊಡುಗೆ ಅನನ್ಯ.
ಬಾಲ್ಯ, ಶಿಕ್ಷಣ ಹಾಗೂ ಕಲಾಸೇವೆ
ಕುಂದಾಪುರ ತಾಲೂಕಿನ ಶಿರಿಯಾರ ಸಮೀಪದ ಜಂಬೂರಿನಲ್ಲಿ ಅಂದಿನ ಮ೦ದಾರ್ತಿ ಮೇಳದ ಖ್ಯಾತ ಯಕ್ಷಗಾನ ಭಾಗವತ ದಿವಂಗತ ಶ್ರೀನಿವಾಸ ಶಾನುಭಾಗ್, ಲಕ್ಷ್ಮೀ ಅಮ್ಮನವರ ಪುತ್ರರಾಗಿ 1939ರಲ್ಲಿ ಜನಿಸಿದ ಇವರು , ಸಾಬ್ರಕಟ್ಟೆ ಮತ್ತು ಬಾರ್ಕೂರುಗಳಲ್ಲಿ 8ನೇ ತರಗತಿಯವರೆಗೆ ಶಿಕ್ಷಣ ಪಡೆದರವರು.ಪತ್ನಿ ಶಾರದಾ ಇಬ್ಬರು ಪುತ್ರರು ಓರ್ವ ಪುತ್ರಿ ಇದು ಇವರ ಕೌಟುಂಬಿಕ ಹಿನ್ನೆಲೆ.
16ನೇ ವಯಸ್ಸಿಗೇ ಶ್ರೀ ಮ೦ದಾರ್ತಿ ಮೇಳವನ್ನು ಸೇರಿ ಕಲಾವಿದನಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ಶ್ರೀ ಅಮೃತೇಶ್ವರೀ, ಮಾರಣಕಟ್ಟೆ, ಕಮಲಶಿಲೆ, ಇಡಗುಂಜಿ, ಗುಂಡಬಾಳ ಮೇಳದಲ್ಲಿ ಸೇವೆ ಸಲ್ಲಿಸಿ, ವೃತ್ತಿ ರಂಗದಿಂದ ನಿವೃತ್ತರಾದರು.
ದಿಗ್ಗಜರ ಒಡನಾಟ
52 ವರ್ಷ ಯಕ್ಷಗಾನ ಕಲಾಸೇವೆ ಮಾಡಿದ ಶ್ಯಾನುಭಾಗರು ಯಾವ ಗುರುಗಳಿಂದಲೂ ನೃತ್ಯವನ್ನು ಕಲಿತವರಲ್ಲ. ಸ್ವತಃ ಯಕ್ಷಗಾನ ಪ್ರದರ್ಶನವನ್ನು ನೋಡಿ ಕಲಿತವರು. ಹಾರಾಡಿ ರಾಮ ಗಾಣಿಗರು, ಕುಷ್ಟ ಗಾಣಿಗರು, ನಾರಾಯಣ ಗಾಣಿಗರು, ವೀರಭದ್ರ ನಾಯ್ಕರು, ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ ಇಂತಹ ಮಹಾನ್ ಕಲಾವಿದರ ಒಡನಾಟದಲ್ಲಿ ಬೆಳೆದವರು.
|
ಜಂಬೂರು ರಾಮಚಂದ್ರ ಶಾನುಭಾಗ್ |
|
ಜನನ |
: |
1939 |
ಜನನ ಸ್ಥಳ |
: |
ಜಂಬೂರು, ಶಿರಿಯಾರ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
52 ವರುಷಗಳ ಕಾಲ ಮ೦ದಾರ್ತಿ, ಅಮೃತೇಶ್ವರೀ, ಮಾರಣಕಟ್ಟೆ, ಕಮಲಶಿಲೆ, ಇಡಗುಂಜಿ, ಪೆರ್ಡೂರು, ಗುಂಡಬಾಳ ಮೇಳದಲ್ಲಿ ಕಲಾಸೇವೆ
|
ಪ್ರಶಸ್ತಿಗಳು:
ಹಲವಾರು ಸ೦ಘ ಸ೦ಸ್ಥೆಗಳಿ೦ದ ಸನ್ಮಾನಗಳು
|
|
|
ದೇವೇಂದ್ರ, ಧರ್ಮರಾಯ, ಚಂದಗೋಪರಂತಹ ಪಾತ್ರಗಳನ್ನು ಇವರಂಥೆ ಅಚ್ಚುಕಟ್ಟಾಗಿ ನಿರ್ವಹಿಸುವವರು ಯಕ್ಷರಂಗದಲ್ಲಿ ಬೇರೊಬ್ಬರಿಲ್ಲ ಎಂದರೆ ಅತಿಶಯೋಕ್ತಿಯಲ್ಲ.
ಮರೀಚಿಕೆಯಾದ ಸರ್ಕಾರಿ ಮಾಶಾಸನ, ಗೌರವ
ಸರಕಾರ ಒಳ್ಳೆಯ ಉದ್ದೇಶವಿಟ್ಟುಕೊಂಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ, ವಿವಿಧ ಅಕಾಡೆಮಿಗಳ ಸಹಭಾಗಿತ್ವದಲ್ಲಿ,ನಾಡು,ನುಡಿ, ಕಲೆ,ಸಾಹಿತ್ಯ,ಸಂಸ್ಕೃತಿಗಾಗಿ ಸಮರ್ಪಣಾಭಾವದಿಂದ ದುಡಿದು, ಗಣನೀಯ ಸಾಧನೆ ಮಾಡಿದ ಕಲಾವಿದರಿಗೆ, ಸಾಧಕರಿಗೆ ಗೌರವ ಹಾಗೂ ಸಹಾಯ,ಪ್ರೋತ್ಸಾಹ, ನೀಡಲು ಪ್ರಾರಂಭಿಸಿದ ಯೋಜನೆಗಳೆಲ್ಲಾ ಅರ್ಹ ಕಲಾವಿದರಿಗೆ ಲಭಿಸುತ್ತಿಲ್ಲದಿರುವುದು ಕಲಾರಂಗದ ಹಾಗೂ ಆಡಳಿತ ವ್ಯವಸ್ಥೆಯ ಒಂದು ದುರಂತ. ಸರಕಾರಿ ಕೃಪಾಪೋಷಿತ ಪ್ರಶಸ್ತಿ, ಮಾಸಾಶನ, ಇನ್ನಿತರ ಸೌಲಭ್ಯಗಳಿಂದ ಪ್ರಾಮಾಣಿಕ ಕಲಾಸೇವೆ, ಸಾಧನೆ ಮಾಡಿದ, ಎಲೆಮರೆ ಕಾಯಿಯಂತೆ ಇದ್ದು, ವೃದ್ಧಾಪ್ಯದಲ್ಲಿ ಬಡತನ,ಕಷ್ಠದ ಜೀವನ ನಡೆಸುತ್ತಿರುವ ಅಪ್ಪಟ ಕಲಾವಿದರು ವಂಚಿತರಾಗಿ ಮೂಲೆಗುಂಪಾಗುತ್ತಿರುವುದು ದು:ಖದ ಸ೦ಗತಿ.
****************
ಕೃಪೆ : http://www.manipalworldnews.com
|
|
|