ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಕಲಾವಿದ ಬೇಗಾರ್ ಪದ್ಮನಾಭ ಶೆಟ್ಟಿಗಾರ್
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ನವ೦ಬರ್ 13 , 2014
|
ಬಡಗುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಮಹಾನ್ ಕೊಡುಗೆ ನೀಡಿದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಕಲಾವಿದರಲ್ಲಿ ಅಗ್ರಮಾನ್ಯ ಹೆಸರು ಬೇಗಾರು ಪದ್ಮನಾಭ ಶೆಟ್ಟಿಗಾರರದ್ದು. ಎಲೆಮರೆಯ ಕಾಯಿಯಾಗಿ ದೀರ್ಘಕಾಲ ಕಲಾಸೇವೆ ಮಾಡಿದ ಇವರಿಗೆ ಈಗ 66ರ ಹರೆಯ.
|
ಮಲೆನಾಡಿನ ಕುಡಿ
ಬಡಗುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಮಲೆನಾಡ ಕಲಾವಿದರ ಕೊಡುಗೆ ಅಪಾರ. ಶೃಂಗೇರಿ, ತೀರ್ಥಹಳ್ಳಿ, ಬೇಗಾರು, ನಗರ, ಹೊಸನಗರ ಮುಂತಾದ ಪ್ರಾಂತ್ಯದ ಕಲಾವಿದರು ಯಕ್ಷಗಾನದ ತೆಂಕು, ಬಡಗಿನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ.
ಎರಡನೇ ವೇಷಧಾರಿ ದಿ. ನಗರ ಜಗನ್ನಾಥ ಶೆಟ್ಟಿ ರಾಜ್ಯ ಪ್ರಶಸ್ತಿ ಪುರಸ್ಕ್ರತ ಹಿರಿಯ ಭಾಗವತ ದಿ. ನೆಲ್ಲೂರು ಮರಿಯಪ್ಪ ಆಚಾರ್, ದಿ. ಶೃಂಗೇರಿ ಭಾಸ್ಕರ ಶೆಟ್ಟಿ ತೆಂಕು ಬಡಗಿನ ಸವ್ಯಸಾಚಿ ಸ್ತ್ರೀ ವೇಷಧಾರಿ ಎಮ್. ಕೆ. ರಮೇಶಾಚಾರ್, ಖ್ಯಾತ ಪುಂಡು ವೇಷಧಾರಿ ತೀರ್ಥಳ್ಳಿ ಗೋಪಾಲಾಚಾರ್, ಕಿಗ್ಗ ಹಿರಿಯಣ್ಣಾಚಾರ್, ಬೇಗಾರ್ ಶಿವಕುಮಾರ್, ತೀರ್ಥಳ್ಳಿ ಚಂದ್ರಾಚಾರ್, ಮುಂತಾದವರು ಮಲೆನಾಡು ಪ್ರಾಂತ್ಯದವರು ಎನ್ನುವುದು ಗಮನಾರ್ಹ. ಇಂತಹ ಮಹಾನ್ ಕಲಾವಿದರ ಸಾಲಿನಲ್ಲಿ ಗುರುತಿಸಲ್ಪಡುವವರಲ್ಲಿ ಪದ್ಮನಾಭ ಶೆಟ್ಟಿಗಾರರು ಸಹ ಒಬ್ಬರು.
ಬಾಲ್ಯ, ಯಕ್ಷಗಾನ ಪಾದಾರ್ಪಣೆ
ಶೃಂಗೇರಿ ತಾಲೂಕಿನ ಬೇಗಾರಿನಲ್ಲಿ ವಾಸವಾಗಿರುವ ಶೆಟ್ಟಿಗಾರರು ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಚೇರ್ಕಾಡಿಯವರು. 1948ರಲ್ಲಿ ಚೇರ್ಕಾಡಿಯ ತಿಮ್ಮ ಶೆಟ್ಟಿಗಾರ್ ಹಾಗು ನರಸಮ್ಮ ದಂಪತಿಗಳ ಸುಪುತ್ರನಾಗಿ ಜನಿಸಿದ ಇವರು ಏಳನೆ ತರಗತಿ ವಿಧ್ಯಾಬ್ಯಾಸ ಮಾಡಿ ತಮ್ಮ ಹದಿನಾರನೇ ವಯಸ್ಸಿನಲ್ಲಿ ಯಕ್ಷರಂಗ ಪ್ರವೇಶ ಮಾಡಿದರು.
ಮಟ್ಟಾಡಿ ಶೈಲಿಯ ಪ್ರಾತಿನಿಧಿಕರಾದ ಶ್ರೀನಿವಾಸ ನಾಯ್ಕರಲ್ಲಿ, ಹಾಗು ಕೃಷ್ಣ ಶೆಟ್ಟಿಗಾರರಲ್ಲಿ ಹೆಜ್ಜೆಗಾರಿಕೆ ಕಲಿತ ಇವರು ಗೋಪಾಲಕೃಷ್ಣ ಮಾಸ್ಟರಲ್ಲಿ ಮಾತುಗಾರಿಕೆಯ ಹದ ಕಲಿತುಕೊಂಡರು. ಇವರ ವೇಷಗಾರಿಕೆ, ಎತ್ತರದ ನಿಲುವು ಹೆಜ್ಜೆಗಾರಿಕೆಯಲ್ಲಿ ವೀರಭದ್ರನಾಯಕರ ಛಾಪನ್ನು ಗುರುತಿಸಬಹುದುದಾಗಿದೆ.
ತೆ೦ಕು-ಬಡಗಿನ ದಿಗ್ಗಜರ ಒಡನಾಟ
ಬಡಗುತಿಟ್ಟಿನ ಗೋಳಿಗರಡಿ ಮೇಳದಲ್ಲಿ ಗೆಜ್ಜೆ ಕಟ್ಟಿದ ಇವರು ನಂತರ ದಿ. ಕಾಳಿಂಗ ನಾವಡರ ಪದ್ಯದಿಂದ ಪ್ರೇರಣೆಗೊಂಡು ಸಾಲಿಗ್ರಾಮ ಮೇಳ ಸೇರಿದರು. ಅಲ್ಲಿನ "ರತಿರೇಖಾ" ಪ್ರಸಂಗದ ಅವರ ಶಶಿಪಾಲನ ಪಾತ್ರ, ಹಾಗು "ಚೆಲುವೆ ಚಿತ್ರಾವತಿ" ಪ್ರಸಂಗದ ಇವರ ಪಾತ್ರಗಳು ಎಂಬತ್ತರ ದಶಕದಲ್ಲಿ ಅವರಿಗೆ ವಿಶೇಷ ಖ್ಯಾತಿಯನ್ನು ತಂದುಕೊಟ್ಟಿತ್ತು. ಸ್ವಥಹ ಅಂದಿನ ಭಾಗವತರಾದ ಕಾಳಿಂಗ ನಾವಡರು ಅವರನ್ನು ಮೆಚ್ಚಿ ಹರಸಿದ್ದರು.
ಬಡಗು ತಿಟ್ಟಿನ ಮಂದಾರ್ತಿ ಮೇಳದಲ್ಲಿ ಧೀರ್ಘಕಾಲ ತಿರುಗಾಟ ಮಾಡಿದ ಇವರು ಸದ್ಯ ತನ್ನ 63ರ ಇಳಿ ವಯಸ್ಸಿನಲ್ಲೂ ಹಿರಿಯಡಕ ಮೇಳದಲ್ಲಿ ಸೇವೆ ಸಲ್ಲಿಸುತಿದ್ದಾರೆ. ತೆಂಕುತಿಟ್ಟಿನ ಸುರತ್ಕಲ್ ಮೇಳದಲ್ಲಿ ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟ್ಟ ಅನಂದ ಮಾಸ್ತರ್, ವೇಣೂರು ಸುಂದರ ಆಚಾರ್, ಎಂ. ಕೆ. ರಮೇಶಾಚಾರ್ ಮುಂತಾದವರ ಒಡನಾಡಿಯಾಗಿ ತಿರುಗಾಟ ಮಾಡಿದ್ದಾರೆ.
|
ಬೇಗಾರು ಪದ್ಮನಾಭ ಶೆಟ್ಟಿಗಾರ್ |
 |
ಜನನ |
: |
1948 |
ಜನನ ಸ್ಥಳ |
: |
ಚೇರ್ಕಾಡಿ, ಬ್ರಹ್ಮಾವರ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಗೋಳಿಗರಡಿ, ಸಾಲಿಗ್ರಾಮ, ಹಿರಿಯಡಕ ಮೇಳಗಳಲ್ಲಿ ಪ್ರಧಾನ ವೇಷಧಾರಿಯಾಗಿ ಕಲಾಸೇವೆ.
|
ಪ್ರಶಸ್ತಿಗಳು:
- ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ 2011
- ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿ
- ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
|
|
|
ಬಡಗು ಹಾಗು ತೆಂಕು ತಿಟ್ಟಿನ ಸ್ತ್ರೀಭೂಮಿಕೆಯಲ್ಲೂ ಸೈ ಎಣಿಸಿ ಕೊಂಡಿದ್ದಾರೆ. ಅಂದು ಅವರು ನಟಿಸಿದ ಪ್ರಭಾವತಿ, ಭ್ರಮರಕುಂತಳೆ, ಮೀನಾಕ್ಷಿ ಮುಂತಾದ ಪಾತ್ರಗಳು ಜನಮನ ರಂಜಿಸಿದ್ದವು
ನಿರಂತರ ಐದು ದಶಕಗಳ ಕಾಲ ಕಲಾಸಾಧನೆಯಲ್ಲಿ ಪೌರಾಣಿಕ ಪಾತ್ರಗಳಾದ ಕೀಚಕ, ಕಾರ್ತವೀರ್ಯ, ಭಸ್ಮಾಸುರ ರಾವಣ, ಭೀಷ್ಮ, ಮುಂತಾದ ಪಾತ್ರಗಳಿಗೆ ತಮ್ಮದೆ ನಡೆಯಲ್ಲಿ ಜೀವ ತುಂಬಿದ್ದಾರೆ. ಕೇವಲ ಬಡಾಬಡಗುತಿಟ್ಟಿನವರಿಗೆ ಮಾತ್ರ ಸೀಮಿತ ವಾಗಿದ್ದ ಕೆಲವೊಂದು ವಿಶಿಷ್ಟ ಪಾತ್ರಗಳಾದ ಕೀಚಕ, ಕಂಸ, ಭಸ್ಮಾಸುರ, ಮುಂತಾದ ಪಾತ್ರಗಳಿಗೆ ವಿಶೇಷವಾಗಿ ಜೀವ ತುಂಬಿದ ಇವರ ಇಂತಹ ಹಲವಾರು ಪಾತ್ರಗಳು ಕಲಾರಸಿಕರ ಮನಗೆದ್ದಿವೆ.
ಯಕ್ಷಗಾನ ಕಲೆಯಲ್ಲಿ ಸನ್ವಿತವಾದ ನಡೆ, ಕುಣಿತ, ಮುದ್ರೆ, ಹಾವ-ಭಾವ, ಮಾತುಗಾರಿಕೆ, ಎಲ್ಲದರಲ್ಲೂ ಪ್ರೌಢಿಮೆ ಸಾಧಿಸಿದ ಇವರು ಸಿದ್ದಿಯ ನೆಲೆಯಲ್ಲಿ ಗುರುತಿಸ ಬಹುದಾದ ಪ್ರಸಿದ್ದ ಕಲಾವಿದ. ಪೌರಾಣಿಕ ಪ್ರಸಂಗದ ಪಾತ್ರಗಳು ಸ್ವಲ್ಪ ಸೊರಗಿದರೂ ಸಹಿಸದ ಇವರ ಗದಾಯುದ್ದದ ಕೌರವ, ಕರ್ಣಾರ್ಜುನದ ಕರ್ಣ, ರಾವಣ ವಧೆಯ ರಾವಣ, ಶನೀಶ್ವರ, ಅಲ್ಲದೆ ನಾಗಶ್ರೀಯ ಶಿಥಿಲ ಮುಂತಾದ ಪಾತ್ರಗಳು ವಿಮರ್ಶಕರ ಪರೀಕ್ಷೆಯಲ್ಲಿ ತೇರ್ಗಡೆಯಾದವುಗಳು.
ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ ಸಹಿತ ಹತ್ತಾರು ಸನ್ಮಾನಗಳಿಗೆ ಪಾತ್ರರಾದ ಇವರಿಗೆ 2011ರ ಸಾಲಿನ ಅಕಾಡೆಮಿ ಪ್ರಶಸ್ತಿ ಸಂದಿದೆ.
****************
|
|
|