ಬಾಳಪ್ಪಶೆಟ್ಟಿ ಪ್ರಶಸ್ತಿ ಪಾತ್ರ ನುಳಿಯಾಲು ಸಂಜೀವ ರೈ
ಲೇಖಕರು : ಭಾಸ್ಕರ ರೈ ಕುಕ್ಕುವಳ್ಳಿ
ಭಾನುವಾರ, ನವ೦ಬರ್ 22 , 2015
|
ಯಕ್ಷಗಾನದಲ್ಲಿ ಭಾಗವತರಿಂದ ಅನಂತರದ ಸ್ಥಾನ ಹಾಸ್ಯಗಾರರಿಗೇ ಸಲ್ಲುತ್ತದೆ. ಹಾಸ್ಯವೆಂದರೆ ನಕ್ಕು ನಗಿಸುವುದಲ್ಲ, ನಗದೆ ನಗಿಸುವುದು ಹಾಸ್ಯ. ಈ ಎರಡನೇ ವರ್ಗಕ್ಕೆ ಸೇರಿದ ವಿರಳ ಹಾಸ್ಯಗಾರರಲ್ಲಿ ದಿ| ಬೆಟ್ಟಂಪಾಡಿ ಬಾಳಪ್ಪಶೆಟ್ಟರು ಪ್ರಮುಖರು. ಅವರು ಗತಿಸಿ ಹತ್ತು ವರ್ಷ ಸಂದಿತು. ಇದೀಗ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಅವರ ದಶಕದ ಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಗಳೂರಿನಲ್ಲಿ ಆಯೋಜಿಸಿದೆ. ಈ ವರ್ಷ ಬಾಳಪ್ಪ ಶೆಟ್ಟಿ ಪ್ರಶಸ್ತಿಗೆ ಭಾಜನರಾದವರು ನುಳಿಯಾಲು ಸಂಜೀವ ರೈ.
|
ಯಕ್ಷಗಾನ ವೇಷಧಾರಿಯಾಗಿ, ತಾಳಮದ್ದಳೆ ಅರ್ಥ ಧಾರಿಯಾಗಿ ಪುತ್ತೂರು ಪರಿಸರದಲ್ಲಿ ಜನಪ್ರಿಯರಾಗಿರುವ ಸಂಜೀವ ರೈ ಮೂಲತಃ ಓರ್ವ ಶಿಕ್ಷಕರು. 1940ರಲ್ಲಿ ಜನಿಸಿದ ಅವರು 1961ರಲ್ಲಿ ಪುತ್ತೂರು ತಾಲೂಕಿನ ದೂಮಡ್ಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ದೈಹಿಕ ಶಿಕ್ಷಕ ಶಿಕ್ಷಣ ತರಬೇತಿ ಪಡೆದು ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ಶಾರೀರಿಕ ಶಿಕ್ಷಕರಾಗಿ 38 ವರ್ಷಗಳ ಸುದೀರ್ಘ ಸೇವೆ ದಾಖಲಿಸಿದರು.
ಬಾಲ್ಯದಿಂದಲೇ ಯಕ್ಷಗಾನದ ಗೀಳನ್ನು ಅಂಟಿಸಿ ಕೊಂಡ ಸಂಜೀವ ರೈ ಹಿರಿಯ ವಿದ್ವಾಂಸ ಡಾ| ಡಿ. ಸದಾಶಿವ ಭಟ್ಟರ ಮಾರ್ಗದರ್ಶನದಲ್ಲಿ ಆಟ-ಕೂಟಗಳಲ್ಲಿ ಭಾಗ ವಹಿಸತೊಡಗಿದರು. ಶ್ರೀ ಸತ್ಯನಾರಾಯಣ ಯಕ್ಷಗಾನ ಕಲಾಕೂಟ ನಿಡ³ಳ್ಳಿ, ಬೆಟ್ಟಂಪಾಡಿ ಯುವಕ ಮಂಡಲ ಮತ್ತು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ಮೂಲಕ ವಿಸ್ತಾರ ಹರವು ಪಡೆದರು. ಬೋಳಾರ ನಾರಾಯಣ ಶೆಟ್ಟರಿಂದ ಪ್ರಭಾವಿತರಾಗಿದ್ದ ಅವರು ಪ್ರಸಿದ್ಧ ಬೋಳಾರ ಶೈಲಿಯನ್ನು ನೆನಪಿಸುತ್ತಾರೆ. ಸಂಜೀವ ರೈ ಪ್ರಬುದ್ಧ ಅರ್ಥಧಾರಿಯಾಗಿ ಪ್ರತಿನಾಯಕ ಪಾತ್ರಗಳಲ್ಲಿ ವಿಜೃಂಭಿಸಿದ್ದಾರೆ.
|
|
ತಾಳಮದ್ದಳೆ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಇದೇ ನ.21ರಂದು ದಿ| ಬೆಟ್ಟಂಪಾಡಿ ಬಾಳಪ್ಪಶೆಟ್ಟಿ ಪ್ರಶಸ್ತಿ ಪ್ರದಾನ ಜರಗಲಿದ್ದು, ನುಳಿಯಾಲು ಸಂಜೀವ ರೈ ಬಾಳಪ್ಪ ಶೆಟ್ಟಿ ದಶಕದ ಪ್ರಶಸ್ತಿ ಸ್ವೀಕರಿಸುವರು.
****************
ಕೃಪೆ : udayavani
|
|
|